ದ್ವಿತೀಯ ಪಿಯುಸಿ ಕನ್ನಡ ಮುಟ್ಟಿಸಿಕೊಂಡವನು ನೋಟ್ಸ್ | 2nd Puc Kannada Muttisikondavanu Notes

2nd Puc Kannada Muttisikondavanu Notes Question and Answer Summery Guide Extract Mcq Pdf Download in Kannada Medium Karnataka State Syllabus 2025 ಮುಟ್ಟಿಸಿಕೊಂಡವನು Question answer Muttisikondavanu Kannada Notes Summary muttisikondavanu kannada notes, 2nd puc ಮುಟ್ಟಿಸಿಕೊಂಡವನು ನಾಟಕ ಮುಟ್ಟಿಸಿಕೊಂಡವನು ಸಾರಾಂಶ Muttisikondavanu Kannada Notes Pdf Download ಮುಟ್ಟಿಸಿಕೊಂಡವನು ಕಥೆ pdf ಮುಟ್ಟಿಸಿಕೊಂಡವನು ಸಂದರ್ಭ ಸ್ವಾರಸ್ಯ second puc kannada poem 12 notes muttisikondavanu muttisikondavanu kannada lesson pdf.

೧. ಮುಟ್ಟಿಸಿಕೊಂಡವನು

– ಪಿ. ಲಂಕೇಶ್

Muttisikondavanu Notes
Muttisikondavanu Notes

ಲೇಖಕರ ಪರಿಚಯ

ಪಿ. ಲಂಕೇಶ್ (1935-2000)‌ ರವರು 1935 ರಲ್ಲಿ ಶಿವಮೊಗ್ಗ ಜಿಲ್ಲೆಯ ಕೊನಗವಳ್ಳಿಯಲ್ಲಿ ಜನಿಸಿದರು. ಶಿವಮೊಗ್ಗದ ಕಾಲೇಜಿನಲ್ಲಿ ಇಂಟರ್‌ಮೀಡಿಯಟ್ (1953-55), ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಇಂಗ್ಲಿಷ್ ಅನರ್ಸ (1955-58), ಮೈಸೂರು ಮಹಾರಾಜ ಕಾಲೇಜಿನಲ್ಲಿ ಇಂಗ್ಲಿಷ್ ಎಂ.ಎ (1958-59) ಮುಗಿಸಿದರು. 1959ರಿಂದ 1962ರವರೆಗೆ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಆಧ್ಯಾಪಕರಾಗಿ ಕೆಲಸ ನಿರ್ವಹಿಸಿದ ಇವರು, ಆನಂತರ ಬೆಂಗಳೂರು ಸೆಂಟ್ರಲ್‌ ಕಾಲೇಜು (1962-65), ಸರ್ಕಾರಿ ಪ್ರಥಮ ದರ್ಜೆ ಕಾಲೇಜು (1965-66) ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ (1966-78) ಅಧ್ಯಾಪಕರಾಗಿದ್ದು, 1978ರಲ್ಲಿ ಅಧ್ಯಾಪಕ ವೃತ್ತಿಗೆ ರಾಜಿನಾಮೆ ನೀಡಿದರು. ಆನಂತರ ಚಲನಚಿತ್ರ ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಕೊಂಡ ಲಂಕೇಶ್ ಸಾಹಿತ್ಯ ಸೃಜನೆಯನ್ನೂ ಮುಂದುವರಿಸಿದರು. ಕಾವ್ಯ, ಕಥೆ, ನಾಟಕ, ಕಾದಂಬರಿ ಪ್ರಕಾರಗಳಲ್ಲಿ ತಮ್ಮ ಬರವಣಿಗೆಯನ್ನು ಮಾಡಿದ್ದಾರೆ. ಅವರ ಪ್ರಮುಖ ಕೃತಿಗಳು: ‘ಬಿಚ್ಚು’, ‘ತಲೆಮಾರು’ (ಕವನ ಸಂಕಲನಗಳು); ‘ನಾನಲ್ಲ’, ‘ಕೆರೆಯ ನೀರನು ಕೆರೆಗೆ ಚೆಲ್ಲಿ’, ‘ಉಮಾಪತಿಯ ಸ್ಕಾಲರ್‌ಶಿಪ್ ಯಾತ್ರೆ’, ‘ಕಲ್ಲುಕರಗುವ ಸಮಯ’, ‘ಉಲ್ಲಂಘನೆ’ (ಕಥಾಸಂಕಲನಗಳು); ‘ಬಿರುಕು’, ‘ಮುಸ್ಸಂಜೆಯ ಕಥಾ ಪ್ರಸಂಗ’, ‘ಅಕ್ಕ’ (ಕಾದಂಬರಿಗಳು); ‘ತೆರೆಗಳು’, ‘ನನ್ನ ತಂಗಿಗೊಂದು ಗಂಡು ಕೊಡಿ’, ‘ಗಿಳಿಯು ಪಂಜರದೊಳಿಲ್ಲ’, ‘ಪೋಲಿಸರಿದ್ದಾರೆ ಎಚ್ಚರಿಕೆ’, ‘ಸಂಕ್ರಾಂತಿ’, ‘ಗುಣಮುಖ’ (ನಾಟಕಗಳು); ‘ದೊರೆ ಈಡಿಪಸ್’, ‘ಅಂತಿಗೊನೆ” (ಅನುವಾದಿತ ನಾಟಕಗಳು); ‘ಪ್ರಸ್ತುತ’, ‘ಕಂಡದ್ದು ಕಂಡ ಹಾಗೆ’ (ವಿಮರ್ಶೆ); ‘ಟೀಕೆ-ಟಿಪ್ಪಣಿ’ (ಅಂಕಣ ಬರಹಗಳು): ‘ಪಾಪದ ಹೂವುಗಳು’ (ಅನುವಾದಿತ ಕವನ ಸಂಕಲನ),

ಪಿ. ಲಂಕೇಶ್ ನಟರಲ್ಲದೆ, ಚಲನಚಿತ್ರ ನಿರ್ದೇಶಕರಾಗಿಯೂ ಹೆಸರು ಗಳಿಸಿದವರು. ಅವರು ನಿರ್ದೇಶಿಸಿದ ‘ಪಲ್ಲವಿ’, ಚಲನಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಸಂದಿದೆ. ಅವರು ನಿರ್ದೇಶಿಸಿದ ಇತರ ಚಿತ್ರಗಳು; ‘ಅನುರೂಪ’, ‘ಎಲ್ಲಿಂದಲೋ ಬಂದವರು’. ಅವರ ‘ಕಲ್ಲುಕರಗುವ ಸಮಯ’ ಕಥಾಸಂಕಲನಕ್ಕೆ 1993ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಕರ್ನಾಟಕ ಪತ್ರಿಕೋದ್ಯಮದಲ್ಲಿ ‘ಲಂಕೇಶ್ ಪತ್ರಿಕೆ’ಗೆ ಒಂದು ವಿಶಿಷ್ಟ ಸ್ಥಾನವಿದೆ. ಅವರ ‘ಹುಳಿಮಾವಿನ ಮರ’ (ಆತ್ಮಕಥನ) ಒಂದು ಅಪರೂಪದ ಕೃತಿ; ಇದು ಕಾದಂಬರಿ ಸ್ವರೂಪದ ಒಂದು ಆತ್ಮಕಥನ.

(ಅ) ಸಾಂದರ್ಭಿಕ ವಿವರಣೆಯನ್ನು ಬಯಸುವ ವಾಕ್ಯಗಳು

೧. ಆಪರೇಷನ್ ಆಗಬೇಕು, ಪರವಾಗಿಲ್ಲವಾ?

ಪಿ. ಲಂಕೇಶರು ಬರೆದಿರುವ ‘ಮುಟ್ಟಿಸಿಕೊಂಡವನು’ ಎಂಬ ಸಣ್ಣಕಥೆಯಲ್ಲಿ ಡಾ।। ತಿಮ್ಮಪ್ಪನವರು ಬಸಲಿಂಗನನ್ನು ಉದ್ದೇಶಿಸಿ ಈ ಮೇಲಿನ ಮಾತನ್ನು ಆಡುವರು. ಊರಿನವರೊಬ್ಬರ ಸಲಹೆಯಂತೆ ಬಸಲಿಂಗನು ತನ್ನ ನೋಯುತ್ತಿರುವ ಕಣ್ಣನ್ನು ತೋರಿಸಿಕೊಳ್ಳಲು ಸರ್ಕಾರಿ ವೈದ್ಯರಾದ ಡಾ।। ತಿಮ್ಮಪ್ಪನವರ ಬಳಿ, ಬಂದು ತನ್ನ ನೆಮ್ಮದಿ ಕೆಡಿಸಿರುವ ವಿಚಾರಗಳನ್ನೆಲ್ಲ ತೋಡಿಕೊಂಡನು. ಅವನನ್ನು ಪರೀಕ್ಷಿಸಿದ ಡಾ।। ತಿಮ್ಮಪ್ಪನವರು ಅವನು ಕಣ್ಣು ನೋವಿನ ಕಾರಣಗಳನ್ನು ಹುಡುಕುತ್ತಲೇ ಬಸಲಿಂಗನಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತಾ “ನಿನ್ನ ಕಣ್ಣು ಸರಿಹೋಗುತ್ತೆ ಆದರೆ ಆಪರೇಷನ್‌ ಆಗಬೇಕು. ಪರವಾಗಿಲ್ಲವಾ?” ಎಮದು ಕೇಳಿದ ಸಂದರ್ಭವಿದಾಗಿದೆ.

೨. ನೀರು ಬಿದ್ದರೆ ಕಣ್ಣು ಹೋಗುವ ಆಪಾಯ ಇವೆ.

ಪಿ. ಲಂಕೇಶರ ‘ಮುಟ್ಟಿಸಿಕೊಂಡವನು’ ಕಥೆಯಲ್ಲಿ ಡಾ. ತಿಮ್ಮಪ್ಪನವರು ಬಸಲಿಂಗನನ್ನು ಉದ್ದೇಶಿಸಿ ಹೇಳಿರುವ ಮಾತುಗಳಿವು. ಕಣ್ಣಿನ ಆಪರೇಷನ್‌ಗೆಂದು ನಿಗದಿತ ದಿನದಂದು ಬಸಲಿಂಗ ಡಾ॥ ತಿಮ್ಮಪ್ಪನವರ ಬಳಿ ಬಂದಾಗ ಅವರು ಅವನಿಗಾಗಿಯೇ ಕಾಯುತ್ತಿದ್ದಂತಿತ್ತು. ಬಸಲಿಂಗನಲ್ಲಿ ಅವರಿಗೆ ವಿಶೇಷ ಪ್ರೀತಿ ಮತ್ತು ಆಸಕ್ತಿಗಳಿದ್ದವು. ಅನುಭವಿ ವೈದ್ಯರಾದ ಅವರು ಬಸಲಿಂಗನನ್ನು ಅಪರೇಷನ್‌ಗೆ ಸಿದ್ದಗೊಳಿಸಿ ಕೆಲವೇ ನಿಮಿಷಗಳಲ್ಲಿ ಆಪರೇಷನ್ ಮಾಡಿ ಮುಗಿಸಿದರು. ನಂತರ ಬಸಲಿಂಗನ ಕೈಹಿಡಿದುಕೊಂಡು “ನೋಡು, ಇದು ಸೂಕ್ಷ್ಮವಾದ ಶಸ್ತ್ರಚಿಕಿತ್ಸೆ. ನೀನು ಎರಡು ವಾರ ತಲೆಗೆ ನೀರನ್ನು ಸೋಂಕಿಸಬಾರದು. ನೀರು ಬಿದ್ದರೆ ಕಣ್ಣು ಕೆಟ್ಟುಹೋಗುವ ಅಪಾಯವಿದೆ. ಇದನ್ನು ಸರಿಯಾಗಿ ನೆನಪಿಟ್ಟುಕೋ” ಎಂದು ಹೇಳಿ ಎಚ್ಚರಿಕೆ ಕೊಟ್ಟು ಕಳುಹಿಸುವ ಸಂದರ್ಭವಿದಾಗಿದೆ.

೩. ಬಸಲಿಂಗಪ್ಪ, ನೀನು ತುಂಬಾ ಒಳ್ಳೆಯವನು.

ಪಿ. ಲಂಕೇಶ್ ಅವರು ರಚಿಸಿರುವ ‘ಮುಟ್ಟಿಸಿಕೊಂಡವನು’ ಎಂಬ ಸಣ್ಣಕಥೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ. ಡಾ। ತಿಮ್ಮಪ್ಪನವರು ಬಸಲಿಂಗನನ್ನು ಉದ್ದೇಶಿಸಿ ಹೇಳುವ ಮಾತಿದು. ಡಾ॥ ತಿಮ್ಮಪ್ಪನವರು ಎರಡು ವಾರಗಳ ಕಾಲ ತಲೆಗೆ ನೀರು ಸೋಂಕಿಸಬಾರದು. ನೀರು ಬಿದ್ದರೆ ಕಣ್ಣು ಕೆಟ್ಟುಹೋಗುವ ಅಪಾಯವಿದೆ ಎಂದು ಎಚ್ಚರಿಸಿದ್ದರೂ ಬಸಲಿಂಗ ಹೆಂಡತಿಯ ಒತ್ತಾಯಕ್ಕೆ ಕಟ್ಟುಬಿದ್ದು ತಲೆಗೆ ಸ್ನಾನಮಾಡಿ ಕಣ್ಣಿನ ನೋವನ್ನು ಪುನಃ ತಂದುಕೊಂಡನು. ಪಶ್ಚಾತ್ತಾಪದಿಂದ ತಿಮ್ಮಪ್ಪನವರ ಬಳಿ ಬರದೆ ಬೇರೆ ಡಾಕ್ಷರುಗಳಿಗೆ ಕಣ್ಣುತೋರಿಸಿದ. ಅವರು ಕೊಟ್ಟ ಔಷಧಿ ಉಪಯೋಗಕ್ಕೆ ಬಾರದಿದ್ದಾಗ ಪುನಃ ಅವನು ತಿಮ್ಮಪ್ಪನವರ ಬಳಿಗೇ ಬರಬೇಕಾಯಿತು. ತಿಮ್ಮಪ್ಪನವರು ಅವನನ್ನು ಕುಳ್ಳಿರಿಸಿ ಪ್ರೀತಿಯಿಂದಲೇ ಪ್ರಶ್ನೆ ಕೇಳಿದರಾದರೂ ಬಸಲಿಂಗ ತಾನು ತನ್ನ ತಲೆಗೆ ನೀರನ್ನು ಸೋಂಕಿಸಿಯೇ ಇಲ್ಲ ಎಂದು ಸುಳ್ಳಾಡಿದನು. ಅವನು ನಡುಗುತ್ತಿರುವುದನ್ನು ಗಮನಿಸಿದ ತಿಮ್ಮಪ್ಪನವರು “ಬಸಲಿಂಗಪ್ಪ, ನೀನು ತುಂಬ ಒಳ್ಳೆಯವನು. ಆದದ್ದು ಆದ ಹಾಗೆ ಹೇಳು ಎಂದು ತಣ್ಣಗೆ ಕೇಳಿದ ಸಂದರ್ಭವಿದು.

೪. ಅವರು ನನ್ನಷ್ಟೇ ಒಳ್ಳೆಯ ಡಾಕ್ಟರು, ಏನು ತಪ್ಪು ತಿಳಿಯಬೇಡ,

ಪಿ. ಲಂಕೇಶರವರ ‘ಮುಟ್ಟಿಸಿಕೊಂಡವನು’ ಎಂಬ ಸಣ್ಣಕಥೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ. ಬಸಲಿಂಗಪ್ಪ ತನ್ನ ಎಡಗಣ್ಣನ್ನು ಪೂರ್ತಿ ಕಳೆದುಕೊಂಡ ಮೇಲೆ ಅವನ ಬಲಗಣ್ಣು ನೋಯತೊಡಗಿತು. ಈ ಬಾರಿ ಅವನು ಬೇರೆ ಡಾಕ್ಟರರಲ್ಲಿ ತೋರಿಸಿ, ಉಪಾಯ ಕಾಣದ ಉಡಾಫೆಯ ಶೈಲಿಯಲ್ಲೇ ಪುನಃ ಡಾ।। ತಿಮ್ಮಪ್ಪನವರ ಬಳಿ ಬಂದನು. ಡಾ।। ತಿಮ್ಮಪ್ಪನವರಿಗೆ ಬಸಲಿಂಗನಲ್ಲಿ ಆಗಿರುವ ಬದಲಾವಣೆ ತಿಳಿಯಿತು. ತಮ್ಮ ಮುಟ್ಟುವಿಕೆಯಿಂದ ಬಸಲಿಂಗನಲ್ಲಿ ಊಹಿಸದಿರುವ ಬದಲಾವಣೆಯನ್ನು ಕಂಡ ಅವರು ಈ ಬಾರಿ ಅವರು ಅವನಿಗೆ “ನೀನು ಡಾ।। ಚಂದ್ರಪ್ಪನವರನ್ನು ನೋಡು, ಅವರು ನನ್ನಷ್ಟೇ ಒಳ್ಳೆಯ ಡಾಕ್ಟರು. ಏನೂ ತಪ್ಪು ತಿಳಿಯಬೇಡ” ಎಂದು ಹೇಳಿ ಬಸಲಿಂಗನನ್ನು ಡಾ।। ಚಂದ್ರಪ್ಪನವರ ಬಳಿಗೆ ಕಳುಹಿಸಿಕೊಟ್ಟ ಸಂದರ್ಭವಿದಾಗಿದೆ.

೫. ಈ ಮುಟ್ಟುವಿಕೆ ನಾನು ಊಹಿಸದೆ ಇದ್ದದ್ದನ್ನು ಮಾಡಿದೆ.

ಪಿ. ಲಂಕೇಶ್ ಅವರ ‘ಮುಟ್ಟಿಸಿಕೊಂಡವನು’ ಕಥೆಯಲ್ಲಿ ಡಾ।। ತಿಮ್ಮಪ್ಪನವರು ಬಸಲಿಂಗನಿಗೆ ಈ ಮೇಲಿನ ಮಾತನ್ನು ಹೇಳುವರು. ತಾನು ಮುಟ್ಟಿದ್ದರಿಂದಾಗಿ ಬಸಲಿಂಗನಿಗಾದ ತೊಂದರೆ ಮತ್ತು ಅವನಲ್ಲಾದ ನಡುವಳಿಕೆಯ ಬದಲಾವಣೆಯನ್ನು ಗಮನಿಸಿದ ಡಾ।। ತಿಮ್ಮಪ್ಪನವರಿಗೆ ನೋವಾಯಿತು. ಆದ್ದರಿಂದ ಅವರು ಬಸಲಿಂಗನ ಇನ್ನೊಂದು ಕಣ್ಣಿನ ಚಿಕಿತ್ಸೆಗೆ ಒಪ್ಪದೆ ಡಾ।। ಚಂದ್ರಪ್ಪನವರ ಬಳಿಹೋಗುವಂತೆ ತಿಳಿಸುತ್ತಾ “ಬಸಲಿಂಗಪ್ಪ, ನಾನು ನಿನ್ನನ್ನು ಮುಟ್ಟಿದ್ದು ಡಾಕ್ಟರಾಗಿ: ಆದರೆ ನಿನ್ನಂಥ ಮುಗ್ಧ ಮನುಷ್ಯನಲ್ಲಿ ಕೂಡ ಈ ಮುಟ್ಟುವಿಕೆ ನಾನು ಊಹಿಸದೆ ಇದ್ದುದ್ದನ್ನು ಮಾಡಿದೆ” ಎಂದರಲ್ಲದೆ, ಇದು ನಿನ್ನ ತಪ್ಪಲ್ಲ. ಇದಕ್ಕಾಗಿ ನಾನು ಯಾರನ್ನೂ ಬೈಯುವುದಿಲ್ಲವೆಂದು ಹೇಳುವರು, ಅವರಿಗೆ ಸಮಾಜದ ವರ್ತನೆಯ ಅರಿವಿತ್ತು

೬. ನೀನು ಅವರನ್ನು ನೋಡಿದರೆ ಮಾತ್ರ ಇರುವ ಒಂದು ಕಣ್ಣು ಉಳಿಯುತ್ತೆ.

ಪಿ. ಲಂಕೇಶ್ ಅವರು ಬರೆದಿರುವ ‘ಮುಟ್ಟಿಸಿಕೊಂಡವನು’ ಎಂಬ ಕಥೆಯಲ್ಲಿ ಬಸಲಿಂಗಪ್ಪನಿಗೆ ಡಾ।। ಚಂದ್ರಪ್ಪನವರು ಈ ಮೇಲಿನಂತೆ ಹೇಳಿದ್ದಾರೆ. ಬಸಲಿಂಗಪ್ಪ ಡಾ।। ಚಂದ್ರಪ್ಪನವರ ಜಾತಿ ತಿಳಿದುಕೊಂಡ ನಂತರ ಅವರ ಬಳಿ ಬಂದು ತನ್ನ ಎಡಗಣ್ಣು ಹೋದ ವಿಚಾರವನ್ನು ತಿರುಚಿ ಹೇಳಿದನು. ಅವನ ಮಾತನ್ನು ಕೇಳಿದ ಡಾ|| ಚಂದ್ರಪ್ಪನವರು ಬಸಲಿಂಗನ ಮಾತನ್ನು ಸ್ವಲ್ಪವೂ ನಂಬದೆ “ಡಾ।। ತಿಮ್ಮಪ್ಪನವರಿಂದ ಆಗದ ಕೆಲಸ ನನ್ನಂಥವರಿಂದ ಸಾಧ್ಯವಿಲ್ಲ. ನಮ್ಮ ವೈದ್ಯಲೋಕ ಬಲ್ಲ ಅತ್ಯಂತ ಪ್ರಾಮಾಣಿಕ, ಪ್ರತಿಭಾವಂತ ಡಾಕ್ಟರು ತಿಮ್ಮಪ್ಪ, ಈ ಕಣ್ಣಿನ ರೋಗ ಅವರ ವಲಯಕ್ಕೆ ಸೇರಿದ್ದು, ನೀನು ಅವರನ್ನು ನೋಡಿದರೆ ಮಾತ್ರ ಇರುವ ಒಂದು ಕಣ್ಣು ಉಳಿಯುತ್ತೆ” ಎಂದು ಹೇಳಿದರು. ಮತ್ತೆ ವಿಧಿಯಿಲ್ಲದೆ ಬಸಲಿಂಗ ಡಾ। ತಿಮ್ಮಪ್ಪನವರ ಬಳಿಗೆ ಹಿಂದಿರುಗುವುದು ಅನಿವಾರ್ಯವಾಯಿತು.

ಹೆಚ್ಚುವರಿ ಪ್ರಶ್ನೆ:

೭. ಈ ಸಲ ತಲೆಗೆ ನೀರು ಸೋಂಕಿಸಕೂಡದು.

ಪಿ. ಲಂಕೇಶ್ ಅವರು ಬರೆದಿರುವ ‘ಮುಟ್ಟಿಸಿಕೊಂಡವನು’ ಎಂಬ ಕತೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ. ಡಾ॥ ತಿಮ್ಮಪ್ಪನವರು ಬಸಲಿಂಗನ ಎರಡನೆಯ ಕಣ್ಣನ್ನು ಅಪರೇಷನ್ ಮಾಡುವ ಸಂದರ್ಭದಲ್ಲಿ ಹೇಳುವ ಮಾತಿದು. ಮೊದಲಬಾರಿ ಆಪರೇಷನ್ ಮಾಡಿದಾಗಲೂ ತಲೆಗೆ ನೀರು ಸೋಂಕಿಸಬಾರದೆಂದು ಎಚ್ಚರಿಸಿರುತ್ತಾರೆ. ಆದರೆ ಅದನ್ನು ಪಾಲಿಸದೆ ಬಸಲಿಂಗನು ತನ್ನ ಒಂದು ಕಣ್ಣನ್ನು ಕಳೆದುಕೊಂಡಿರುತ್ತಾನೆ. ಆದ್ದರಿಂದ ತಿಮ್ಮಪ್ಪನವರು ಎರಡನೇ ಬಾರಿಗೆ ಆಪರೇಷನ್ ಮಾಡುವಾಗ ಈ ಸಲ ತಲೆಗೆ ನೀರು ಸೋಂಕಿಸಕೂಡದೆಂದು ಎಚ್ಚರಿಸುತ್ತಾರೆ.

(ಅ) ಒಂದು ಅಂಕದ ಪ್ರಶ್ನೆಗಳು (ಒಂದು ವಾಕ್ಯದಲ್ಲಿ ಉತ್ತರಿಸಿ).

೧. ಬಸಲಿಂಗನ ಹೆಂಡತಿಯ ಹೆಸರೇನು?

ಸಿದ್ಲಿಂಗಿ

೨. ಬಸಲಿಂಗನಿಗೆ ಕಾಣಿಸಿಕೊಂಡ ತೊಂದರೆ ಯಾವುದು?

ಕಣ್ಣುನೋವು

೩. ಬಸಲಿಂಗನಿಗೆ ಮೊದಲು ಯಾವ ಕಣ್ಣಿನಲ್ಲಿ ನೋವು ಆರಂಭವಾಯಿತು?

ಎಡಗಣ್ಣು

೪. ʼಮುಟ್ಟಿಸಿಕೊಂಡವನುʼ ಕತೆಯಲ್ಲಿ ಬರುವ ಸರ್ಕಾರಿ ಆಸ್ಪತ್ರೆಯ ವೈದ್ಯರ ಹೆಸರೇನು?

ಡಾ॥ ತಿಮ್ಮಪ್ಪ

೫. ಸರ್ಕಾರಿ ಆಸ್ಪತ್ರೆಯ ಬಗ್ಗೆ ಬಸಲಿಂಗನಲ್ಲಿದ್ದ ಅಭಿಪ್ರಾಯವೇನು?

ದಿಕ್ಕು ದಿವಾಳಿ ಇಲ್ಲದವರು ಹೋಗುವ ಜಾಗ

೬. ಬಸಲಿಂಗನು ಡಾ। ತಿಮ್ಮಪ್ಪನಿಗೆ ಏನೆಂದು ಸುಳ್ಳು ಹೇಳಿದನು?

ತಾನು ತಲೆಗೆ ನೀರು ಸೋಂಕಿಸಿಯೇ ಇಲ್ಲವೆಂದು

೭. ಬಸಲಿಂಗ ವೈದ್ಯರಿಗಾಗಿ ಅಲೆದಾಗ ಜೊತೆಗಿದ್ದ ರಾಜಕಾರಣಿ ಯಾರು?

ರುದ್ರಪ್ಪ

೮. ಬಸಲಿಂಗನ ಕಾಯಿಲೆ ದೇಹದ ಮಟ್ಟದಿಂದ ಯಾವ ಸ್ತರವನ್ನು ತಲುಪತೊಡಗಿತ್ತು?

ಮಾನಸಿಕ

೯. ಡಾ॥ ತಿಮ್ಮಪ್ಪ ಬಸಲಿಂಗನಿಗೆ ಯಾವ ವೈದ್ಯರನ್ನು ಕಾಣಬೇಕೆಂದು ಸೂಚಿಸಿದರು?

ಡಾ॥ ಚಂದ್ರಪ್ಪ

೧೦. ಕೊನೆಗೆ ಬಸಲಿಂಗ ಯಾವುದರಿಂದ ಮುಕ್ತನಾಗಿದ್ದ?

ಸುಳ್ಳುಗಳಿಂದ

ಹೆಚ್ಚುವರಿ ಪ್ರಶ್ನೆ:

೧೧. ಸೂತಕವನ್ನು ಪರಿಹರಿಸಲು ಬಸಲಿಂಗ ಏನು ಮಾಡಿದನು?

ತಲೆಗೆ ಸ್ನಾನ

೧೨. ಬಸಲಿಂಗ ತನ್ನ ಕಣ್ಣು ಹೋಗಲು ಯಾರು ಕಾರಣವೆಂದು ತಿಳಿಯುತ್ತಾನೆ?

ಡಾ॥ ತಿಮ್ಮಪ್ಪ

೧೩. ಕೊನೆಯ ಪ್ರಯತ್ನವಾಗಿ ಬಸಲಿಂಗ ಯಾವ ಆಸ್ಪತ್ರೆಯ ವೈದ್ಯರನ್ನು ಕಾಣಲು ತೀರ್ಮಾನಿಸಿದ?

ಸರ್ಕಾರಿ

೧೪. ದಿಕ್ಕು ದಿವಾಳಿ ಇಲ್ಲದವರು ಹೋಗುವ ಜಾಗ ಯಾವುದೆಂದು ಬಸಲಿಂಗ ಭಾವಿಸಿದ್ದ?

ಸರ್ಕಾರಿ ಆಸ್ಪತ್ರೆ

(ಇ ) ಎರಡು ಅಂಕಗಳ ಪ್ರಶ್ನೆಗಳು (ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ):

೧. ಬಸಲಿಂಗನಿಗೆ ಅದು ಪುರುಸೊತ್ತಿಲ್ಲದ ಕಾಲ ಯಾಕೆ?

ಕೆಲಸ ಮಾಡುವುದನ್ನು ನಾಲ್ಕು ದಿನ ತಡಮಾಡಿದರೆ ಕುಳ ನೆಲದಲ್ಲಿ ನಾಟುವುದಿಲ್ಲವೆಂಬ ಚಿಂತೆಯಾಗಿತ್ತು. ಇರುವ ಎರಡು ಎತ್ತುಗಳಲ್ಲಿ ಒಂದು ನೊಗ ಹೆಗಲಿಗಿಟ್ರೊಡನೆ ಮಲಗಿ, ಎಷ್ಟು ಹೊಡೆದರೂ ಮೇಲೇಳುತ್ತಿರಲಿಲ್ಲ. ಇದರ ಜೊತೆಗೆ ಮಗುವಿಗೆ ಆರೋಗ್ಯ ಸರಿಯಿರಲಿಲ್ಲ. ಈ ಎಲ್ಲದರ ನಡುವೆ ಬಸಲಿಂಗನ ಎಡಗಣ್ಣಲ್ಲಿ ನೋವು ಕಾಣಿಸಿಕೊಂಡು ದಿನೇದಿನೇ ಹೆಚ್ಚುತ್ತಲೇ ಹೋಯಿತು. ಆದ್ದರಿಂದ ಬಸಲಿಂಗನಿಗೆ ಅದು ಯಾವುದಕ್ಕೂ ಪುರುಸೊತ್ತಿಲ್ಲದ ಕಾಲವಾಗಿತ್ತು.

೨. ಹೆಂಡ್ತಿ ಸಿದ್ದಿಂಗಿ ಏನು ಹೇಳುತ್ತಲೇ ಇದ್ದಳು?

ಮಗುವಿಗೆ ಮೈಯಲ್ಲಿ ಸರಿಯಿಲ್ಲ. ಕೆಮ್ಮು ಹೋಗುತ್ತಲೇ ಇಲ್ಲ. ಶಿವನೂರು ಸ್ವಾಮಿಗಳಿಗೆ ತೋರಿಸಬೇಕೆಂದು ಬಸಲಿಂಗನ ಹೆಂಡತಿ ಸಿದ್ದಿಂಗಿ ಹೇಳುತ್ತಲೇ ಇದ್ದಳು.

೩. ಬಸಲಿಂಗನಿಗೆ ತನ್ನ ಕಷ್ಟದ ಮುಂದೆ ಯಾವುದು ಗೌಣವಾಗಿ ಕಾಣತೊಡಗಿದವು?

ಬಸಲಿಂಗನಿಗೆ ತನ್ನ ಕಷ್ಟದ ಮುಂದೆ ಉಳಿದಿರುವ ನೆಲ, ಮಗುವಿನ ಕಾಯಿಲೆ ಎಲ್ಲವೂ ಗೌಣವಾಗಿ ಕಾಣತೊಡಗಿದವು.

೪. ಕಣ್ಣನ್ನು ಪರೀಕ್ಷಿಸಿದ ಡಾ॥ ತಿಮ್ಮಪ್ಪ ಬಸಲಿಂಗನಿಗೆ ಏನೆಂದು ಹೇಳಿದರು?

ಡಾ॥ ತಿಮ್ಮಪ್ಪನವರು ಬಸಲಿಂಗನ ಕಣ್ಣನ್ನು ಪರೀಕ್ಷಿಸಿದ ನಂತರ “ನಿನ್ನ ಕಣ್ಣು ಸರಿಹೋಗುತ್ತೆ. ಆದರೆ ಅಪರೇಷನ್ ಆಗಬೇಕು. ಪರವಾಗಿಲ್ಲವಾ?” ಎಂದು ಕೇಳಿದರು.

೫. ಸಿದ್ದಿಂಗಿ ಏಕೆ ರಾದ್ಧಾಂತ ಮಾಡಿದಳು?

ಸಿದ್ದಿಂಗಿಗೆ ಡಾ॥ ತಿಮ್ಮಪ್ಪ ಹೊಲೆಯರವರೆಂದು ಅದು ಹೇಗೋ ತಿಳಿದುಬಿಟ್ಟಿತ್ತು. ಅವರನ್ನು ಬಸಲಿಂಗ ಮುಟ್ಟಿಸಿಕೊಂಡಿದ್ದುದರಿಂದ ತಲೆಗೆ ಸ್ನಾನ ಮಾಡೆಂದು ಅವಳು ರಾದ್ದಾಂತ ಮಾಡಿದಳು.

೬. ಅನ್ಯ ಡಾಕ್ಟರುಗಳು ಬಸಲಿಂಗನ ಕಾಯಿಲೆ ಬಗ್ಗೆ ಏನೆಂದು ಪ್ರತಿಕ್ರಿಯಿಸಿದರು?

ಕೆಲವು ಡಾಕ್ಟರರು “ಇದಕ್ಕೆ ಅಪರೇಷನ್ನೇ ಬೇಕಿಲ್ಲ. ಆ ಡಾ॥ ತಿಮ್ಮಪ್ಪನಿಗೆ ಬುದ್ದಿ ಇಲ್ಲ. ಅದಕ್ಕೆ ಅಪರೇಷನ್ ಮಾಡಿದ್ದಾರೆ” ಎಂದು ಹೇಳಿದರು.

೭. ಡಾ॥ ಚಂದ್ರಪ್ಪ ಬಸಲಿಂಗನಿಗೆ ಡಾ॥ ತಿಮ್ಮಪ್ಪನ ಬಗ್ಗೆ ಕೊಟ್ಟ ಅಭಿಪ್ರಾಯವೇನು?

ಡಾ॥ ಚಂದ್ರಪ್ಪನವರು “ಡಾ॥ ತಿಮ್ಮಪ್ಪನವರಿಂದ ಆಗದ ಕೆಲಸ ನನ್ನಂಥವರಿಂದ ಸಾಧ್ಯವಿಲ್ಲ. ನಮ್ಮ ವೈದ್ಯಲೋಕ ಬಲ್ಲ ಅತ್ಯಂತ ಪ್ರಾಮಾಣಿಕ, ಪ್ರತಿಭಾವಂತ ಡಾ॥ ತಿಮ್ಮಪ್ಪ” ಎಂದು ಬಸಲಿಂಗನಿಗೆ ಹೇಳಿದರು.

೮. ಕೊನೆಯಲ್ಲಿ ಬಸಲಿಂಗನಿಗೆ ಏನೆಂದು ನಿಶ್ಚಿತವಾಗತೊಡಗಿತ್ತು?

ತನ್ನ ಉಡಾಫೆ, ಸುಳ್ಳು, ಜಾತಿ, ಮಠದ ಗುರು- ಯಾರೂ ತನ್ನ ಕಣ್ಣನ್ನು ಉಳಿಸುವುದಿಲ್ಲ ಎಂದು ಬಸಲಿಂಗನಿಗೆ ನಿಶ್ಚಿತವಾಗತೊಡಗಿತು

ಹೆಚ್ಚುವರಿ ಪ್ರಶ್ನೆಗಳು:

೯. ಎಡಗಣ್ಣಿನ ನೋವು ಪುನಃ ಕಾಣಿಸಿಕೊಂಡ ಮೇಲೆ ಬಸಲಿಂಗ ಏನು ಮಾಡಿದನು?

ಎಡಗಣ್ಣು ನೋವು ಪುನಃ ಆರಂಭವಾದ ಬಳಿಕ ಬಸಲಿಂಗ ಅಸ್ಪೃಶ್ಯರಾದ ಡಾ।। ತಿಮ್ಮಪ್ಪ ಅವರ ಬಳಿ ಹೋಗದೆ ಉರಿನಲ್ಲಿದ್ದ ಇತರ ವೈದ್ಯರ ಬಳಿ ಹೋಗಿ ತೋರಿಸಿದ, ಆದರೆ ಆ ಔಷಧಗಳಿಂದ ಅವನ ಕಣ್ಣುನೋವು ವಾಸಿಯಾಗಲಿಲ್ಲ. ಮತ್ತೆ ಅವನು ಡಾ।। ತಿಮ್ಮಪ್ಪನವರನ್ನೇ ಹುಡುಕಿಕೊಂಡು ಬರಬೇಕಾಯಿತು.

೧೦. ಬಸಲಿಂಗ ಹೊಸ ಎತ್ತುಗಳನ್ನು ಹೊಂಚಿಕೊಳ್ಳಬೇಕೆಂಬುದಕ್ಕೆ ಕಾರಣವೇನು?

ಬಸಲಿಂಗನ ಎರಡು ಎತ್ತುಗಳಲ್ಲಿ ಒಂದು ನೊಗ ಹೆಗಲಿಗಿಟ್ರೊಡನೆ ಮಲಗಿಬಿಡುತ್ತಿತ್ತು. ಎಷ್ಟು ಹೊಡೆದರೂ ಮೇಲೇಳದೆ ಕಳ್ಳಾಟವಾಡುತ್ತಿತ್ತು. ಇನ್ನೊಂದು ಸಹ ಅದರಂತೆಯೇ ಆಗುವ ಸೂಚನೆಗಳಿದ್ದುದ್ದರಿಂದ ಬಸಲಿಂಗ ಇವೆರಡನ್ನೂ ಮಾರಿ, ಹೊಸ ಎತ್ತುಗಳನ್ನು ಹೊಂಚಿಕೊಳ್ಳಬೇಕೆಂಬ ಯೋಜನೆಯಲ್ಲಿದ್ದನು.

೧೧. ಡಾ। ತಿಮ್ಮಪ್ಪ ತನ್ನ ರೋಗಿ ಬಸಲಿಂಗನಲ್ಲಿ ಆಗಿದ್ದ ಯಾವ ಬದಲಾವಣೆಯನ್ನು ಗಮನಿಸಿದರು?

ಡಾ।। ತಿಮ್ಮಪ್ಪನವರ ಬಳಿ ಪುನಃ ಬಂದ ಬಸಲಿಂಗನಲ್ಲಾದ ಬದಲಾವಣೆಗಳನ್ನು ಅವರು ಸೂಕ್ಷ್ಮವಾಗಿ ಗಮನಿಸಿದರು. ಆತನ ಮುಗ್ಧತೆ ಮಾಯವಾಗಿ, ಉಡಾಫೆಯ ಶೈಲಿಯಲ್ಲಿ ಮಾತಾಡುತ್ತಿದ್ದ. ಆತನ ಗಂಟಲು ದೊಡ್ಡದಾಗಿತ್ತು. ಅವನು ತನಗರಿವಿಲ್ಲದಂತೆಯೇ ಸಣ್ಣವನಾಗತೊಡಗಿದ್ದ. ಅವನ ಕಾಯಿಲೆ ದೇಹದ ಮಟ್ಟದಿಂದ ಮಾನಸಿಕ ಸ್ತರವನ್ನು ತಲುಪತೊಡಗಿದ್ದನ್ನು ಡಾ।। ತಿಮ್ಮಪ್ಪನವರು ಗಮನಿಸಿದ್ದರು.

೧೨. ಬಸಲಿಂಗ ತನ್ನ ಕಷ್ಟಗಳನ್ನು ಡಾ।। ತಿಮ್ಮಪ್ಪನವರಲ್ಲಿ ಏನೆಂದು ತೋಡಿಕೊಂಡ?

ಬಸಲಿಂಗನು ತನ್ನ ಉಳಿದಿರುವ ನೆಲ, ಮಾತು ಕೇಳದ ಎತ್ತುಗಳು, ಅವುಗಳನ್ನು ಮಾರಲು ತನ್ನಲ್ಲಿ ಚಾಣಾಕ್ಷತೆಯಿಲ್ಲದಿರುವುದು, ಮಗುವಿಗೆ ಕೆಮ್ಮು ವಾಸಿಯಾಗುತ್ತಿಲ್ಲವೆಂದು ಹೆಂಡತಿ ಗೊಣಗಾಡುತ್ತಿರುವುದು, ಇವೆಲ್ಲದರ ಜೊತೆಗೆ ತನ್ನ ಕಣ್ಣು ನೋವು ತನ್ನನ್ನು ಬಾಧಿಸುತ್ತಿರುವುದು – ಈ ಎಲ್ಲ ಸಂಗತಿಗಳನ್ನೂ ಡಾ।। ತಿಮ್ಮಪ್ಪನವರೆದುರು ತೋಡಿಕೊಂಡನು.

೧೩. ಡಾ।। ತಿಮ್ಮಪ್ಪ ನೋವಿನಿಂದ ಬಸಲಿಂಗನಿಗೆ ಹೇಳಿದ ಮಾತುಗಳೇನು?

ತಿಮ್ಮಪ್ಪನವರು ಬಸಲಿಂಗನನ್ನುದ್ದೇಶಿಸಿ “ಬಸಲಿಂಗಪ್ಪ, ನಾನು ನಿನ್ನನ್ನು ಮುಟ್ಟಿದ್ದು ಡಾಕ್ಟರಾಗಿ;ಆದರೆ ನಿನ್ನಂಥ ಮುಗ್ಧ ಮನುಷ್ಯನಲ್ಲಿ ಕೂಡ ಈ ಮುಟ್ಟುವಿಕೆ ನಾನು ಊಹಿಸದೆ ಇದ್ದದ್ದನ್ನು ಮಾಡಿದೆ. ಅದು ನಿನ್ನ ತಪ್ಪಲ್ಲ. ಇದಕ್ಕಾಗಿ ನಾನು ಯಾರನ್ನೂ ಬೈಯುವುದಿಲ್ಲ, ನೀನು ಈ ಸಲ ಒಂದು ಕೆಲಸ ಮಾಡು. ನನ್ನ ಹೆಸರನ್ನು ಹೇಳಿ ಡಾ।। ಚಂದ್ರಪ್ಪನವರನ್ನು ನೋಡು. ಅವರೂ ನನ್ನಷ್ಟೇ ಒಳ್ಳೆಯ ಡಾಕ್ಟರು. ಏನೂ ತಪ್ಪು ತಿಳಿಯಬೇಡ” ಎಂದು ನೋವಿನಿಂದ ಹೇಳಿದರು

(ಈ) ನಾಲ್ಕು ಅಂಕಗಳ ಪ್ರಶ್ನೆಗಳು (ಐದಾರು ವಾಕ್ಯಗಳಲ್ಲಿ ಉತ್ತರಿಸಿ);

೧. ಬಸಲಿಂಗ ಎದುರಿಸುತ್ತಿದ್ದ ಸಮಸ್ಯೆಗಳು ಯಾವುವು?

ಬಸಲಿಂಗನಿಗೆ ಅದು ಯಾವುದಕ್ಕೂ ಪುರುಸೊತ್ತಿಲ್ಲದ ಕಾಲವಾಗಿತ್ತು. ಕೆಲಸ ಮಾಡುವುದನ್ನು ನಾಲ್ಕು ದಿನ ತಡಮಾಡಿದರೆ ಕುಳ ನೆಲದಲ್ಲಿ ನಾಟುವುದಿಲ್ಲವೆಂಬ ಚಿಂತೆಯಾಗಿತ್ತು. ಇರುವ ಎರಡು ಎತ್ತುಗಳಲ್ಲಿ ಒಂದು ನೊಗ ಹೆಗಲಿಗಿಟ್ಟೊಡನೆ ಮಲಗಿ, ಎಷ್ಟು ಹೊಡೆದರೂ ಮೇಲೇಳುತ್ತಿರಲಿಲ್ಲ, ಈ ಎತ್ತುಗಳನ್ನು ಸಾಟಿಯಲ್ಲಿ ಯಾರಿಗಾದರೂ ಮಾರಿ ಬೇರೆಯದನ್ನು ತರಬೇಕೆಂದು ಅವನು ಯೋಚಿಸುತ್ತಿದ್ದನು. ಇದರ ಜೊತೆಗೆ ಮಗುವಿಗೆ ಆರೋಗ್ಯ ಸರಿಯಿರಲಿಲ್ಲ. ಏನು ಮಾಡಿದರೂ ಮಗುವಿನ ಕೆಮ್ಮು ಕಡಿಮೆಯಾಗುತ್ತಿಲ್ಲ. ಶಿವನೂರು ಸ್ವಾಮಿಗಳಿಗೆ ತೋರಿಸಬೇಕು ಎಂದು ಹೆಂಡತಿ ಹೇಳುತ್ತಿದ್ದರೂ ಬಸಲಿಂಗನಿಗೆ ಪುರುಸೊತ್ತಿರಲಿಲ್ಲ. ಈ ಎಲ್ಲದರ ನಡುವೆ ಬಸಲಿಂಗನ ಎಡಗಣ್ಣಲ್ಲಿ ನೋವು ಕಾಣಿಸಿಕೊಂಡು ದಿನೇದಿನೇ ಹೆಚ್ಚುತ್ತಲೇ ಹೋಯಿತು.

೨. ಕಣ್ಣುನೋವು ಶುರುವಾದ ಆರಂಭದಲ್ಲಿ ಬಸಲಿಂಗ ಪಡೆದುಕೊಂಡ ಚಿಕಿತ್ಸೆ ಯಾವ ರೀತಿಯದು?

ಬಸಲಿಂಗ ತನ್ನ ಎಡಗಣ್ಣು ನೋಯತೊಡಗಿದಾಗ ಕಣ್ಣುಬೇನೆ ಎಂದು ಮೊದಲಿಗೆ ಉದಾಸೀನ ಮಾಡಿದ. ನೋವಿನೊಂದಿಗೆ ಕಣ್ಣು ಮಂದವಾಗುತ್ತಿದೆ ಎನ್ನಿಸಿ ಹೆದರಿಕೆಯಾದಾಗ ನಗರದ ತನ್ನ ಎಂದಿನ ವೈದ್ಯರಿಗೆ ತೋರಿಸಿದ. ಅವರು ಹಚ್ಚಿಕೊಳ್ಳಲು ಒಂದು ಲೇಹ್ಯಕೊಟ್ಟು ಧೈರ್ಯ ಹೇಳಿ ಕಳುಹಿಸಿದರು. ಸ್ವಲ್ಪ ಸಮಾಧಾನದಿಂದ ಮನೆಗೆ ಬಂದ ಬಸಲಿಂಗ ವೈದ್ಯರು ಹೇಳಿದಂತೆ ಹಲವು ದಿನ ಲೇಷ್ಠ ಹಚ್ಚಿಕೊಂಡು ಬಟ್ಟೆಯ ಕಾವು, ಉಪ್ಪಿನ ಕಾವು ಕೊಟ್ಟುಕೊಂಡ. ಆದರೆ ಕಣ್ಣಿನ ಮಂದಸ್ಥಿತಿ ಮತ್ತು ನೋವು ಎರಡೂ ಹೆಚ್ಚುತ್ತಲೇ ಹೋಯಿತು. ಒಲ್ಲದ ಮನಸ್ಸಿನಿಂದಲೇ ಆತ ಸರ್ಕಾರಿ ಆಸ್ಪತ್ರೆಯ ಡಾ।। ತಿಮ್ಮಪ್ಪನವರ ಬಳಿ ಬಂದ.

೩. ಬಸಲಿಂಗ ಡಾ।। ತಿಮ್ಮಪ್ಪನವರ ಸೂಚನೆಗಳನ್ನು ಪಾಲಿಸದೆ ಇರಲು ಕಾರಣವೇನು?

ಸರ್ಕಾರಿ ಆಸ್ಪತ್ರೆಯ ವೈದ್ಯರಾದ ಡಾ।। ತಿಮ್ಮಪ್ಪನವರು ‘ಇದು ಸೂಕ್ಷ್ಮವಾದ ಶಸ್ತ್ರಚಿಕಿತ್ಸೆ, ನೀನು ಎರಡು ವಾರ ತಲೆಗೆ ನೀರನ್ನು ಸೋಂಕಿಸಬಾರದು, ನೀರು ಬಿದ್ದರೆ ಕಣ್ಣು ಕೆಟ್ಟುಹೋಗುವ ಅಪಾಯವಿದೆ. ಇದನ್ನು ಸರಿಯಾಗಿ ನೆನಪಿಟ್ಟುಕೊ ಎಂದು ಎಚ್ಚರಿಸಿ ಕಳುಹಿಸಿದ್ದರೂ ಮನೆಗೆ ಬಂದ ಮೇಲೆ ಹೆಂಡತಿ ಸಿದ್ಲಿಂಗಿಯ ತಗಾದೆಯಿಂದಾಗಿ ಡಾ।। ತಿಮ್ಮಪ್ಪನವರ ಸೂಚನೆಯನ್ನು ಪಾಲಿಸಲು ಬಸಲಿಂಗಳಿಗೆ ಸಾಧ್ಯವಾಗಲಿಲ್ಲ. ಬಸಲಿಂಗ ಹೇಳದಿದ್ದರೂ ಸಿದ್ಲಿಂಗಿಗೆ ಅದು ಹೇಗೋ ಡಾ। ತಿಮ್ಮಪ್ಪ ಹೊಲೆಯರೆಬುದು ಗೊತ್ತಾಗಿ ದೊಡ್ಡ ರಾದ್ಧಾಂತವನ್ನೇ ಎಬ್ಬಿಸಿದಳು. ಬಸಲಿಂಗನಿಗೂ ತಿಮ್ಮಪ್ಪ ತನ್ನನ್ನು ಮುಟ್ಟುವ ಮುನ್ನ ಅವರು ತಮ್ಮ ಜಾತಿ ಬಗ್ಗೆ ಒಂದು ಮಾತು ಹೇಳಿದ್ದರೆ ಚೆನ್ನಾಗಿತ್ತೆಂದು ಅನ್ನಿಸಿತು. ಈ ಎಲ್ಲದರಿಂದಾಗಿ ಆತನಿಗೆ ತನ್ನ ಅಳ್ತನದಲ್ಲಿ ಏನೋ ಕಮ್ಮಿಯಾದಂತೆನಿಸಿ ಬಸಲಿಂಗ ನೊಂದುಕೊಂಡ. ಈ ವಿಷಯವನ್ನು ಯಾರಿಗೂ ಹೇಳಬಾರದೆಂದೂ ಗಂಡ-ಹೆಂಡತಿ ತೀರ್ಮಾನಿಸಿ ಮೈಲಿಗೆ ಪರಿಹರಿಸಿಕೊಳ್ಳಲು ಮೈತೊಳೆದುಕೊಳ್ಳಲು ನಿರ್ಧರಿಸಿ, ಬಿಸಿನೀರಿನ ಸ್ನಾನ ಮಾಡಿದಾಗ ಮುಂದಿನ ಸಮಸ್ಯೆಗಳು ಎದುರಾದವು.

೪. ಬಸಲಿಂಗನಿಗೆ ಸಿಟ್ಟು ಬರಲು ಕಾರಣವೇನು? ಅದನ್ನು ಆತ ಯಾವ ರೀತಿಯಲ್ಲಿ ವ್ಯಕ್ತಪಡಿಸುತ್ತಾನೆ?

ತಲೆಗೆ ಸ್ನಾನ ಮಾಡಿದ್ದರಿಂದ ಬಸಲಿಂಗನ ಎಡಗಣ್ಣು ತೀವ್ರ ತೊಂದರೆಗೀಡಾಯಿತು. ಬಸಲಿಂಗ ಮೊದಲು ಬೇರೆ ವೈದ್ಯರ ಬಳಿ ಹೋದರೂ ವಿಧಿಯಿಲ್ಲದೆ ಡಾ॥ ತಿಮ್ಮಪ್ಪನವರ ಬಳಿಬಂದು ತಾನು ನೀರು ಸೋಂಕಿಸಿಯೇ ಇಲ್ಲವೆಂದು ಸುಳ್ಳಾಡಿದ ನಂತರ ನಡೆದುದನ್ನು ತಿಳಿಸಿ ಇನ್ನೊಮ್ಮೆ ಅಪರೇಷನ್ ಮಾಡಿ. ನಿಮ್ಮ ಮಾತು ಮೀರುವುದಿಲ್ಲ ಎಂದು . ಕೇಳಿಕೊಂಡನು. ಪುನು ಅಪರೇಷನ್ ಮಾಡಲು ಒಪ್ಪದ ಡಾ ತಿಮ್ಮಪ್ಪ “ಈಗಿರೋ ಗಾಯಕ್ಕೆ ಔಷಧಿ ಕೊಡೇನೆ. ತಪ್ಪದೆ ಹಚ್ಚಿಕೋ” ಎಂದಾಗ ಬಸಲಿಂಗನಿಗೆ ಸಿಟ್ಟು ಬಂದಿತು. ತನ್ನ ಜಾತಿಯನ್ನು ಕೆಡಿಸಿದ ತಿಮ್ಮಪ್ಪ ತನ್ನ ಬಗ್ಗೆ ನಿರ್ಲಕ್ಷ್ಯ ತಾಳಿರುವಂತೆ ಆತನಿಗೆ ಅನ್ನಿಸಿ, ತನ್ನ ಕಣ್ಣು ಹೋಗಲು ಅವರೇ ಕಾರಣರೆಂದು ನಿರ್ಧರಿಸಿದ. ತಾನು ಬಲ್ಲವರಲ್ಲಿ ತಿಮ್ಮಪ್ಪನವರ ಬಗ್ಗೆ ಇಲ್ಲಸಲ್ಲದ ಚಾಡಿಮಾತು ಹೇಳಿ ನಂಬಿಸಿದ. ಹೀಗೆ ಬಸಲಿಂಗ ತನ್ನ ಸಿಟ್ಟಿನ ಪರಿಣಾಮದಿಂದ ಸಣ್ಣತನ ಬೆಳೆಸಿಕೊಂಡನು.

೫. ಬಸಲಿಂಗ ಕೊನೆಯಲ್ಲಿ ತೆಗೆದುಕೊಂಡ ನಿರ್ಧಾರ ಯಾವುದು? ಅದಕ್ಕೆ ಕಾರಣಗಳೇನು?

ಡಾ।। ಚಂದ್ರಪ್ಪನವರು ತಿಮ್ಮಪ್ಪನವರ ಬಗ್ಗೆ ವ್ಯಕ್ತಪಡಿಸಿದ ಭಾವನೆಯನ್ನು ಕೇಳಿದ ನಂತರ ಬಸಲಿಂಗನು ತನ್ನ ಬಲಗಣ್ಣನ್ನು ಉಳಿಸಿಕೊಳ್ಳಲು ನಿರ್ಧರಿಸುತ್ತಾನೆ. ದಿನೇದಿನೇ ಬಲಗಣ್ಣಿನ ದೃಷ್ಟಿ ಮಂದವಾಗುತ್ತಿರುವುದು ಅವನ ಅರಿವಿಗೆ ಬಂದಿತ್ತು. ತನ್ನ ಉಡಾಫೆ, ಸುಳ್ಳು, ಜಾತಿ, ಮಠದ ಗುರು- ಯಾರೂ ತನ್ನನ್ನು ಉಳಿಸುವುದಿಲ್ಲವೆಂದು ನಿಶ್ಚಿತವಾಗಿತ್ತು. ಅವನಿಗೆ ಡಾ।। ತಿಮ್ಮಪ್ಪನವರ ಮಿಂಚಿನಂತಹ ಬೆರಳು, ಪ್ರೀತಿ ತುಂಬಿದ ಮುಖ ನೆನಪಿಗೆ ಬಂದು. ನೇರವಾಗಿ ತಿಮ್ಮಪ್ಪನವರ ಬಳಿ ಬಂದವನೇ ಕಣ್ಣೀರು ಸುರಿಸುತ್ತಾ ಅವರ ಕೈ ಹಿಡಿದುಕೊಂಡ. ಅವರನ್ನು ಗಟ್ಟಿಯಾಗಿ ಹಿಡಿದು ಅಳತೊಡಗಿದ. ಅವನಲ್ಲಿ ಮರುಕಳಿಸಿದ ಮುಗ್ಧತೆಯನ್ನು ಕಂಡು ಅವರೂ ಕರಗಿದರು. ಬಸಲಿಂಗನ ಈ ಕೊನೆಯ ನಿರ್ಧಾರದಿಂದಾಗಿ ಅವನ ಬಲಗಣ್ಣು

ಹೆಚ್ಚುವರಿ ಪ್ರಶ್ನೆಗಳು:

೬. ವ್ಯಕ್ತಿಯ ಜಾತಿಪ್ರಜ್ಞೆ ಉಂಟುಮಾಡುವ ನೋವು, ತಳಮಳ, ಸಮಸ್ಯೆಗಳನ್ನು ‘ಮುಟ್ಟಿಸಿಕೊಂಡವನು’ ಕತೆಯಲ್ಲಿ ಹೇಗೆ ನಿರೂಪಿಸಲಾಗಿದೆ?

‘ಮುಟ್ಟಿಸಿಕೊಂಡವನು’ ಕಥೆಯಲ್ಲಿ ಬರುವ ಬಸಲಿಂಗ ಅಸ್ಪೃಶ್ಯರಾದ ಡಾ।। ತಿಮ್ಮಪ್ಪನವರಿಂದ ಮುಟ್ಟಿಸಿಕೊಂಡ ಕಾರಣಕ್ಕೆ ಸೂತಕದ ಭಾವನೆಯಿಂದ ನರಳುವುದನ್ನು ನೋಡಬಹುದು. ಇದೇ ಕಾರಣದಿಂದ ವೈದ್ಯರ ಎಚ್ಚರಿಕೆಯನ್ನೂ ಮೀರಿ, ಸೂತಕ ಕಳೆದುಕೊಳ್ಳಲು ತಲೆಗೆ ಸ್ನಾನ ಮಾಡಿದ ಪರಿಣಾಮ ತನ್ನ ಒಂದು ಕಣ್ಣನ್ನೇ ಶಾಶ್ವತವಾಗಿ ಕಳೆದುಕೊಳ್ಳಬೇಕಾಗುತ್ತದೆ. ತನ್ನ ಕಣ್ಣು ಹೋಗಲು ಮುಟ್ಟಿದ ತಿಮ್ಮಪ್ಪನವರೇ ಕಾರಣವೆಂದು ಅವನು ನಂಬುವಂತಾಗುತ್ತದೆ. ಬಸಲಿಂಗನಂತಹ ಮುಗ್ಧ ವ್ಯಕ್ತಿಯಲ್ಲಿ ಜಾತಿಯ ಭಾವನೆ ಜಾಗೃತವಾದಾಗ ಅವನಲ್ಲಿದ್ದ ಮುಗ್ಧತೆಯ ಜಾಗದಲ್ಲಿ ಸುಳ್ಳು, ಉಡಾಫೆ, ಕೌರಗಳು ನೆಲೆಸುವುದನ್ನು ನಾವು ಈ ಕಥೆಯಲ್ಲಿ ಗಮನಿಸುತ್ತೇವೆ. ಬಸಲಿಂಗ ದಂಪತಿಗಳಿಗೆ ಜಾತೃಸ್ಥರಲ್ಲಿ ತಮ್ಮ ಸ್ಥಾನಮಾನ ಕೆಳಗಿಳಿಯಿತೆಂಬ ಭಾವನೆ ಹುಟ್ಟುವುದನ್ನು ಈ ಕಥೆ ಪರಿಣಾಮಕಾರಿಯಾಗಿ ನಿರೂಪಿಸುತ್ತದೆ. ‘ಜಾತಿ’ ಭಾವನೆ ಬಸಲಿಂಗನಲ್ಲುಂಟು ಮಾಡಿದ ನೋವು, ತಳಮಳ ಹಾಗೂ ಆತ ಅನುಭವಿಸಿದ ತೊಂದರೆಗಳೆಲ್ಲವನ್ನು ಕಥೆಗಾರರು ತುಂಬಾ ಸೂಕ್ಷ್ಮವಾಗಿ ವಿವರಿಸಿದ್ದಾರೆ.

೭. ಡಾ।। ತಿಮ್ಮಪ್ಪನವರ ವ್ಯಕ್ತಿತ್ವವನ್ನು ನಿರೂಪಿಸಿ.

ಡಾ।। ತಿಮ್ಮಪ್ಪನವರು ಬಿಡುವಿಲ್ಲದ ವೈದ್ಯರು. ಸೂಟಿಯಾದ ಬೆರಳುಗಳ, ವಿಶ್ವಾಸ ತುಂಬಿದ ಮಾತುಗಳ ಡಾಕ್ಷರು. ಬಸಲಿಂಗನ ಕಣ್ಣು ನೋವಿಗೆ ಸೂಕ್ತ ಶಸ್ತ್ರಚಿಕಿತ್ಸೆಯನ್ನು ಅವನ ಅನುಮತಿ ಪಡೆದೇ ಮಾಡಿರುತ್ತಾರೆ. ಜಾತಿಯಿಂದ ಹೊಲೆಯರಾದ ಡಾ॥ ತಿಮ್ಮಪ್ಪ ತನ್ನನ್ನು ಮುಟ್ಟಿದ್ದಲ್ಲದೆ, ತನ್ನ ಕಣ್ಣು ಹೋಗಲು ಅವರೇ ಕಾರಣರೆಂದು ಬಸಲಿಂಗ ಇತರರ ಬಳಿ ಆರೋಪಿಸಿದ್ದನ್ನು ಅರಿತಾಗಲೂ ಬಸಲಿಂಗ ಪುನಃ ಬಂದಾಗ ಅವರು ಅಸಮಾಧಾನಗೊಳ್ಳುವುದಿಲ್ಲ. ತಮ್ಮ ಮುಟ್ಟುವಿಕೆ ಬಸಲಿಂಗನಂತಹ ಮುಗ್ಧನ ಮೇಲೆ ಮೂಡಿರುವ ಪರಿಣಾಮವನ್ನು ಆರಿತು. ತಾವಾಗಿಯೇ ಅವನನ್ನು ಡಾ।। ಚಂದ್ರಪ್ಪನವರ ಬಳ ಕಳಿಸುವಷ್ಟು ಉದಾರಿ. ಜಾತಿಯ ಭಾವನೆಗಳು ಉಂಟುಮಾಡುವ ಆಘಾತಗಳನ್ನು ಮಾನವೀಯ ನೆಲೆಯಲ್ಲಿ ಎದುರಿಸಿ ನಿಲ್ಲುವ ವೈದ್ಯಲೋಕ ಕಂಡ ಪ್ರತಿಭಾವಂತ ವೈದ್ಯರಾಗಿದ್ದಾರೆ.

ಭಾಷಾಭ್ಯಾಸ

೧. ಈ ಕತೆಯಲ್ಲಿ ಬರುವ ಗ್ರಾಮ ಹಾಗೂ ಅನ್ಯದೇಶ ಪದಗಳನ್ನು ಆರಿಸಿ ಬರೆಯಿರಿ.

ಗ್ರಾಮ್ಯ ಪದಗಳು ಆನ್ಯದೇಶ ಪದಗಳು

ಸಿದ್ಲಿಂಗಿ ಖುಷಿ

ಹೊಯ್ದುಂತೆ ಛಾತಿ

ಆಳ್ತನ ಸರ್ಕಾರಿ

ಹೊಯ್ದು ಆಸ್ಪತ್ರೆ

ಹೆಂಗಾದ್ರೂ ಡಾಕ್ಟರ್

ಇನ್ನೊಂದ್ಸಲ‌ ಆಪರೇಷನ್

ಬಿಡ್ರಿ‌ ಔಷಧಿ

ಉಡಾಫೆ

೨) ಸೂತಕ – ಅದರ ಅರ್ಥ ಮೈಲಿಗೆ. ಜಾತ, ಮೃತ, ರಜಸ್ಸು, ಉಚ್ಚಿಷ್ಟ, ಜಾತಿ ಎಂಬ ಪಂಚಸೂತಕಗಳಿವೆ.

೩) ದೃಷ್ಟಿ, ಕ್ಷಣ – ಇವುಗಳ ತದ್ಭವ ರೂಪಗಳನ್ನು ಬರೆಯಿರಿ.

ದೃಷ್ಟಿ – ದಿಟ್ಟಿ

ಕ್ಷಣ – ಚಣ.

ಖಾಲಿ ಬಿಟ್ಟ ಸ್ಥಳಗಳನ್ನು ಭರ್ತಿ ಮಾಡಿರಿ:

೧. ಬಸಲಿಂಗನ ಹೆಂಡತಿಯ ಹೆಸರು————–

ಸಿದ್ಲಿಂಗಿ

೨. ಬಸಲಿಂಗ ವೈದ್ಯರಿಗಾಗಿ ಆಲೆದಾಗ ಜೊತೆಗಿದ್ದ ರಾಜಕಾರಣಿ—————

ರುದ್ರಪ್ಪ

೩. ಬಸಲಿಂಗನಿಗೆ ಕಾಣಿಸಿಕೊಂಡ ತೊಂದರೆ————

ಕಣ್ಣುನೋವು

೪. ವೈದ್ಯಲೋಕ ಕಂಡ ಅತ್ಯಂತ ಪ್ರಾಮಾಣಿಕ ಡಾಕ್ಟರ್————–

ಡಾ. ತಿಮ್ಮಪ್ಪ

೫. ʼಮುಟ್ಟಿಸಿಕೊಂಡವನು’ ಕತೆಯಲ್ಲಿ ಬರುವ ಸರ್ಕಾರಿ ಆಸ್ಪತ್ರೆಯ ವೈದ್ಯರ ಹೆಸರು———-

ತಿಮ್ಮಪ್ಪ

೬. ಕೊನೆಗೆ ಬಸಲಿಂಗ—————- ಮುಕ್ತನಾಗಿದ್ದ.

ಸುಳ್ಳುಗಳಿಂದ

೭. ಡಾ. ತಿಮ್ಮಪ್ಪ ಬಸಲಿಂಗನಿಗೆ ಕಾಣಲು ಹೇಳಿದ ವೈದ್ಯರು ————–

ಡಾ. ಚಂದ್ರಪ್ಪ

೮. ಬಸಲಿಂಗನ ಕಾಯಿಲೆ ದೇಹದ ಮಟ್ಟದಿಂದ —————- ಸ್ತರವನ್ನು ತಲುಪತೊಡಗಿತ್ತು.

ಮಾನಸಿಕ

ಕಥೆಯ ಸಾರಾಂಶ ಮತ್ತು ವಿಮರ್ಶೆ:

ಸಾರಾಂಶ-1:

ಪಿ. ಲಂಕೇಶ್ ಅವರು ಬರೆದಿರುವ ‘ಮುಟ್ಟಿಸಿಕೊಂಡವನು’ ಎಂಬುದು ಅತ್ಯಂತ ಪ್ರಭಾವಶಾಲಿಯಾದ ಒಂದು ಸಣ್ಣಕಥೆಯಾಗಿದೆ. ಭಾರತೀಯ ಸಮಾಜದಲ್ಲಿ ಆಸ್ಪೃಶ್ಯಭಾವನೆಯು ಮನುಷ್ಯನನ್ನು ಎಂತೆಂತಹ ಕಷ್ಟನಷ್ಟಗಳಿಗೆ ಗುರಿ ಮಾಡುವುದೆ೦ಬುದನ್ನು ಲೇಖಕರು ಇಲ್ಲಿ ಮನಗಾಣಿಸಿದ್ದಾರೆ. ಜಾತಿ ಭಾವನೆ-ಅಸ್ಪೃಶ್ಯತೆಗಳ ನಿವಾರಣೆಯ ನಿಟ್ಟಿನಲ್ಲಿ ಈ ಕಥೆ ಮಹತ್ವದ ಸ್ಥಾನವನ್ನು ಪಡೆದುಕೊಳ್ಳುತ್ತದೆ.

ಬಸಲಿಂಗ ಎಂಬುವವನ ಬಳಿ ಎರಡು ಎತ್ತುಗಳಿದ್ದವು. ಅವುಗಳಲ್ಲಿ ಒಂದು ಕೃಷಿ ಕೆಲಸಕ್ಕೆ ಸಹಕಾರ ನೀಡುತ್ತಿರಲಿಲ್ಲ. ಅದನ್ನು ನೋಡಿ ಮತ್ತೊಂದು ಎತ್ತು ಕೂಡಾ ಅಸಹಕಾರ ನೀಡುತ್ತಿತ್ತು. ಬಸಲಿಂಗ ಈ ಎತ್ತುಗಳಿಂದ ಕೆಲಸ ಮಾಡಿಸಿಕೊಳ್ಳಲು ಹೊಡೆದು ಹೊಡೆದು ಸಾಕಾಗಿ ಅವೆರಡೂ ಎತ್ತುಗಳನ್ನು ಮಾರಾಟ ಮಾಡಿ ಹೊಸ ಜೋಡಿ ಎತ್ತುಗಳನ್ನು ಕೊಳ್ಳಬೇಕೆಂದು ಕೊಂಡನು. ಈ ಮೊಂಡು ಎತ್ತುಗಳನ್ನು ಮಾರಾಟ ಮಾಡಲು ಸಾವಿರ ಸುಳ್ಳು ಹೇಳಬೇಕಾಗಿತ್ತು. ಅದಕ್ಕೆ ಅಗತ್ಯವಾದ ಛಾತಿ, ಮಾತುಗಾರಿಕೆ ಅವನಲ್ಲಿರಲಿಲ್ಲ. ಇಂತಹ ಸಂದರ್ಭದಲ್ಲಿ ಬಸಲಿಂಗನಿಗೆ ಕಣ್ಣುಬೇನೆ ಆರಂಭವಾಯಿತು.

ಬಸಲಿಂಗ ನಾಲ್ಕುದಿನ ನೋವಿದ್ದು ಹೋಗುತ್ತದೆಂದು ಉದಾಸೀನ ಮಾಡಿದನು. ವೈದ್ಯರ ಬಳಿ ಹೋಗಲಿಲ್ಲ. ಆದರೆ ದಿನ ಕಳೆದಂತೆ ದೃಷ್ಟಿಶಕ್ತಿ ಕಡಿಮೆಯಾಗಲಾರಂಭಿಸಿತು. ಮಾಮೂಲಿ ವೈದ್ಯರ ಬಳಿಗೆ ಹೋದಾಗ ಆ ವೈದ್ಯರು ತಮ್ಮ ಪಾಂಡಿತ್ಯದ ಬಗ್ಗೆ ಜಂಭ ಹೊಡೆದು, ಒಂದು ಮುಲಾಮು ಕೊಟ್ಟು ಕಳುಹಿಸಿದರು. ಅವರಿಗೆ ರೋಗದ ಬಗ್ಗೆ ಅರಿವಿರಲಿಲ್ಲ. ನಾಲ್ಕಾರು ದಿನಗಳಾದವು. ಮುಲಾಮು ವ್ಯಾಧಿಯನ್ನು ಗುಣಪಡಿಸಲಿಲ್ಲ. ಆಗ ಯಾರೋ ಒಬ್ಬರು ಡಾ।। ತಿಮ್ಮಪ್ಪ ಎಂಬ ಕಣ್ಣಿನ ವೈದ್ಯರಿಗೆ ತೋರಿಸಿ ಎಂದರು.

ಬಸಲಿಂಗ ಡಾ।। ತಿಮ್ಮಪ್ಪ ಅವರ ಆಸ್ಪತ್ರೆಗೆ ಹೋದನು. ಅಲ್ಲಿ ಜನ ಸಾಲುಗಟ್ಟಿ ನಿಂತಿದ್ದರು. ಸರದಿ ಬಂದ ಮೇಲೆ ಬಸಲಿಂಗ ಕಣ್ಣಿನ ನೋವಿನೊಡನೆ ತನ್ನ ಸಂಸಾರದ ಕಷ್ಟಗಳನ್ನು ಹೇಳಿದನು. ಡಾ।। ತಿಮ್ಮಪ್ಪ ಚೆನ್ನಾಗಿ ಪರೀಕ್ಷೆ ಮಾಡಿ “ಆಪರೇಷನ್ ಮಾಡಿಸಿಕೊಂಡರೆ ಸರಿ ಹೋಗುತ್ತದೆ” ಎಂದರು. ಮಾರನೆಯ ದಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಬಸಲಿಂಗ ನಿರ್ಧರಿಸಿದನು.

ಡಾ।। ತಿಮ್ಮಪ್ಪ ವೈದ್ಯಕೀಯ ವಲಯದಲ್ಲಿ ತುಂಬ ಪ್ರಸಿದ್ಧರಾಗಿದ್ದರು. ಅಷ್ಟೇ ಅಲ್ಲದೆ ಅವರಲ್ಲಿ ಅಪಾರವಾದ ಮಾನವೀಯತೆ, ತಾಳ್ಮೆ ಸಹಾಯವರ ಮನೋಧರ್ಮಗಳಿದ್ದವು. ಬಸಲಿಂಗ ಬರುವ ಹೊತ್ತಿಗೆ ಶಸ್ತ್ರಚಿಕಿತ್ಸೆಗೆ ಅಗತ್ಯ ವಾದುದೆಲ್ಲವನ್ನೂ ಸಿದ್ಧಪಡಿಸಿಕೊಂಡಿದ್ದರು. ಪ್ರೀತಿಯಿಂದ ಮಾತಾಡಿಸಿ ಧೈಯವನ್ನು ತುಂಬಿ ಶಸ್ತ್ರಚಿಕಿತ್ಸೆ ಮಾಡಿದ ಮೇಲೆ ಅವರು ಬಸಲಿಂಗನಿಗೆ “ಎರಡುವಾರ ತಲೆಗೆ ನೀರನ್ನು ಸೋಂಕಿಸಬಾರದು; ನೀರು ಬಿದ್ದರೆ ಕಣ್ಣು ಕೆಟ್ಟು ಹೋಗುವ ಅಪಾಯವಿದೆ. ಇದನ್ನು ಸರಿಯಾಗಿ ನೆನಪಿನಲ್ಲಿಟ್ಟುಕೊ” ಎಂದು ಹೇಳಿ ಕಳುಹಿಸಿದರು.

ಬಸಲಿಂಗ ಮನೆಗೆ ಹೋದ ಮೇಲೆ ಅವನ ಹೆಂಡತಿ ಸಿದ್ದಿಂಗಿ ದೊಡ್ಡ ರಾದ್ಧಾಂತ ಮಾಡಿದಳು. “ಡಾ।। ತಿಮ್ಮಪ್ಪ ಹೊಲೆಯರು: ಅವರು ನಿಮ್ಮನ್ನು ಮುಟ್ಟಿದ್ದಾರೆ: ಅವರ ಶಸ್ತ್ರಚಿಕಿತ್ಸೆ ಮಾಡುವ ಮೊದಲು ತಮ್ಮ ಜಾತಿ ಹೇಳಬೇಕಾಗಿತ್ತು. ಈಗ ತಲೆಗೆ ಸ್ನಾನ ಮಾಡಿ ಮೈಲಿಗೆಯನ್ನು ಕಳೆದುಕೊಳ್ಳಬೇಕು” ಎಂದು ಹಟ ಹಿಡಿದಳು. ಕಣ್ಣು ನೆನೆಯದಂತೆ ಬಿಸಿನೀರು ಹೊಯ್ದು ಸ್ನಾನ ಮಾಡಿಸಿದಳು.

ಬಸಲಿಂಗನಿಗೆ ಮೊದಲೆರಡು ದಿನ ಕಣ್ಣು ನೋವಿರಲಿಲ್ಲ. ಮೂರನೆಯ ದಿನ ನೋವು ಆರಂಭವಾಯಿತು. ಆಗ ಅಸ್ಪೃಶ್ಯರಾದ ಡಾ।। ತಿಮ್ಮಪ್ಪ ಅವರ ಬಳಿ ಮತ್ತೆ ಹೋಗುವ ಮನಸ್ಸಾಗಲಿಲ್ಲ. ಆದ್ದರಿಂದ ಊರಿನಲ್ಲಿದ್ದ ಇತರ ವೈದ್ಯರ ಬಳಿ ಹೋಗಿ ತೋರಿಸಿದನು. ಆ ಡಾಕ್ಟರ್ “ತಿಮ್ಮಪ್ಪನಿಗೆ ಬುದ್ದಿ ಇಲ್ಲ. ಸುಮ್ಮನೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ” ಎಂದು ಟೀಕಿಸಿ ಔಷಧಿ ಕೊಟ್ಟರು. ಆದರೆ ಆ ಔಷಧಗಳಿಂದ ನೋವು ವಾಸಿಯಾಗಲಿಲ್ಲ. ಕೊನೆಗೆ ಡಾ।। ತಿಮ್ಮಪ್ಪ ಅವರಲ್ಲಿಗೆ ಹೋಗಿ ತೋರಿಸಿದನು. ತಲೆಗೆ ಸ್ನಾನ ಮಾಡಿದ ವಿಚಾರವನ್ನು ಹೇಳಲೇ ಇಲ್ಲ. ಡಾ।। ತಿಮ್ಮಪ್ಪ ನಿಧಾನವಾಗಿ ಮಾತನಾಡಿಸಿ ಎಂದಿನಿಂದ ನೋವು? ಏನೇನು ಮಾಡಿದೆ? ಎಂದೆಲ್ಲ ಮೇಲಿಂದ ಮೇಲೆ ಕೇಳಿದಾಗ ಬಸಲಿಂಗ ಮನೆಯಲ್ಲಿ ನಡೆದ ಕಥೆ ಎಲ್ಲವನ್ನೂ ಹೇಳಿಬಿಟ್ಟನು. ಆಗ ಬಸಲಿಂಗನ ಹೃದಯ ಹಗುರವಾಯಿತು. ಡಾ।। ತಿಮ್ಮಪ್ಪ ಸಮಾಜವನ್ನು ಅರ್ಥಮಾಡಿಕೊಂಡಿದ್ದರು. ಅಸ್ಪೃಶ್ಯತಾ ಭಾವನೆಗೆ ಸಮಾಜದ ಒತ್ತಡ ಕಾರಣ ಎಂದೂ ಅವರಿಗೆ ತಿಳಿದಿತ್ತು; ಆದ್ದರಿಂದ ಬಸಲಿಂಗ ಮತ್ತು ಅವನ ಹೆಂಡತಿ ಸಿದ್ದಿಂಗಿ ಅವರ ವರ್ತನೆಗೆ ಕೋಪ ಮಾಡಿಕೊಳ್ಳಲಿಲ್ಲ. ಬಸಲಿಂಗ ತನಗೆ ಇನ್ನೊಂದು ಸಲ ಆಪರೇಷನ್ ಮಾಡಿರೆಂದೂ ಈ ಬಾರಿ ಅವರ ಮಾತನ್ನು ಮೀರುವುದಿಲ್ಲ ಎಂದು ಕೇಳಿಕೊಂಡನು.

ಸಾರಂಶ – 2

ಡಾ।। ತಿಮ್ಮಪ್ಪ ಕಣ್ಣಿಗೆ ಔಷಧಿ ಕೊಟ್ಟರು. ಆದರೆ ನೋವು ಹೋಯಿತು; ಕಣ್ಣೂ ಹೋಯಿತು. ಕೆಲವು ದಿನಗಳಾದ ಮೇಲೆ ಬಸಲಿಂಗನ ಬಲಗಣ್ಣಿನಲ್ಲಿ ನೋವು ಆರಂಭವಾಯಿತು. ಬಸಲಿಂಗ ಡಾ।। ತಿಮ್ಮಪ್ಪ ಅವರ ಬಳಿಗೆ ಹೋಗದೆ ಇತರ ವೈದ್ಯರ ಬಳಿ ಹೋಗಿ ಚಿಕಿತ್ಸೆ ಮಾಡಿಸಿಕೊಂಡನು. ಫಲ ಕಾಣಲಿಲ್ಲ. ನೋವು ಮುಂದುವರಿಯಿತು. ಕೊನೆಗೆ ಡಾ।। ತಿಮ್ಮಪ್ಪ ಅವರ ಬಳಿಗೆ ಹೋದನು. ಆಗ ಅವರು ಡಾ।। ಚಂದ್ರಪ್ಪನವರ ಬಳಿ ಹೋಗು ಎಂದು ಹೇಳಿದರು.

ಬಸಲಿಂಗ ಡಾ।। ಚಂದ್ರಪ್ಪನವರ ಜಾತಿಯನ್ನು ತಿಳಿದು ‘ಪರವಾಗಿಲ್ಲ’ ಎಂದುಕೊಂಡು ಅವರ ಬಳಿ ಹೋದನು. ಅವರು ವಿಷಯವೆಲ್ಲವನ್ನು ವಿಚಾರಿಸಿ ಕೊನೆಗೆ “ಡಾ।। ತಿಮ್ಮಪ್ಪನವರಿಂದ ಆಗದ ಕೆಲಸ ನನ್ನಂಥವರಿಂದ ಸಾಧ್ಯವಿಲ್ಲ. ಡಾ।। ತಿಮ್ಮಪ್ಪ ಪ್ರತಿಭಾವಂತರು, ಈ ಕಣ್ಣಿನ ರೋಗ ಅವರ ವಲಯಕ್ಕೆ ಸೇರಿದ್ದು, ಅವರ ಬಳಿ ಹೋದರೆ ಕಣ್ಣು ಉಳಿಯುತ್ತದೆ” ಎಂದರು.

ಬಸಲಿಂಗನಿಗೆ ಕಣ್ಣಿನ ನೋವು ತೀವ್ರವಾಗಿತ್ತು. ಅವನು ಸಿದ್ದಿಂಗಿಯ ಮಾತುಗಳಿಗೆ ಕಿವಿಗೊಡದೆ ಡಾ।। ತಿಮ್ಮಪ್ಪ ಅವರ ಬಳಿಗೆ ಹೋದನು. ಡಾ।। ತಿಮ್ಮಪ್ಪ ಅವನನ್ನು ಪ್ರೀತಿಯಿಂದ ಬರಮಾಡಿಕೊಂಡು ಸಮಾಧಾನದ ಮಾತುಗಳನ್ನು ಹೇಳಿ ಶಸ್ತ್ರಚಿಕಿತ್ಸೆ ಮಾಡಿದರು. “ಈ ಸಲ ತಲೆಗೆ ನೀರು ಸೋಂಕಿಸಕೂಡದು. ಈ ಕಣ್ಣು ಸರಿಹೋಗುತ್ತೆ” ಎಂದರು. ಬಸಲಿಂಗಪ್ಪ ಅವರ ಮಾತಿಗೆ ಕಿವಿಗೊಟ್ಟು ಒಂದು ಕಣ್ಣನ್ನುಳಿಸಿಕೊಂಡನು.

ವಿಚಾರವಂತಿಕೆ ಇಲ್ಲದ ಜನ ಈ ರೀತಿ ಸಂಕುಚಿತ ದೃಷ್ಟಿಯನ್ನು ಹೊಂದಿ ನಾನಾ ಬಗೆಯ ಕಷ್ಟನಷ್ಟಗಳಿಗೆ ಒಳಗಾಗುತ್ತಾರೆ. ಹೃದಯ ವೈಶಾಲ್ಯತೆ, ಸಂಕುಚಿತ ದೃಷ್ಟಿಯಿಲ್ಲದ ಧೋರಣೆ, ಅಸ್ಪೃಶ್ಯತೆಯ ಆಚರಣೆಯಿಂದ ಬೇರೆಯವರಿಗೆ ಉಂಟಾಗುವ ನೋವು ಎಂತಹುದು ಎಂಬ ಪ್ರಜ್ಞೆಯನ್ನು ಬೆಳೆಸಿಕೊಂಡಾಗ ವ್ಯಕ್ತಿಗೂ ಸಮಾಜಕ್ಕೂಹಿತವಾಗುತ್ತದೆ. ಬಸಲಿಂಗಪ್ಪನ ಬದುಕನ್ನು ಪರಾಮರ್ಶಿಸಿದರೆ ‘ಕೆಟ್ಟ ಮೇಲೆ ಬುದ್ದಿ ಬಂತು’ ಎಂದ ಗಾದೆ ಅವರ ಜೀವನಕ್ಕೆ ಅನ್ವಯಿಸುವಂತಾಗುತ್ತದೆ. ಆದರೆ ಕೆಟ್ಟ ಮೇಲಾದರೂ ಬುದ್ದಿ ಬಂತಲ್ಲ ಎಂಬುದೇ ಸಮಾಧಾನದ ಸಂಗತಿ.

ಶಬ್ದಾರ್ಥ: ಕುಳ – ನೇಗಿಲಿನ ತುದಿ; ನೊಗ – ಎತ್ತುಗಳ ಹೆಗಲಿನ ಮೇಲೆ ಹೇರುವ ಮರದ ದಿಂಡು; ಗಾಸಿ – ತೊಂದರೆ, ಹಿಂಸೆ; ಸಾಟಿ – ವಿನಿಮಯ, ಅದಲುಬದಲು; ಲೇಹ್ಯ – ನೆಕ್ಕಿತಿನ್ನುವ ಔಷಧ, ಹಕ್ಕೆ – ಆಶ್ರಯ, ನೆಲೆ; ಹಿತ್ತಲು – ಮನೆಯ ಹಿಂದಿನ ಪ್ರದೇಶ; ಗೇಯು – ದುಡಿಮೆ; ಛಾತಿ – ಧೈರ್ಯ, ಕೆಚ್ಚು; ನಿಸೂರ – ನಿರುಮ್ಮಳ; ಹೊಂಚಿಕೊಳ್ಳು-ಹೊಂದಿಸಿಕೊಳ್ಳು.

Leave a Comment