ದ್ವಿತೀಯ ಪಿಯುಸಿ ಕನ್ನಡ ವಚನಗಳು ನೋಟ್ಸ್ ಪ್ರಶ್ನೋತ್ತರಗಳು, 2nd Puc Kannada Vachanagalu Notes Question and Answer Summery Guide Extract Mcq Pdf Download in Kannada Medium Karnataka State Syllabus 2025 2nd puc kannada notes question and answer ದ್ವಿತೀಯ ಪಿಯುಸಿ ಕನ್ನಡ ನೋಟ್ಸ್ pdf 2nd puc kannada 2nd poem notes ಬಸವಣ್ಣನವರ ವಚನಗಳು ಮತ್ತು ಸಾರಾಂಶ pdf Basavanna vachanagalu in kannada ಬಸವಣ್ಣನವರ ವಚನಗಳು ಮತ್ತು ಭಾವಾರ್ಥ basavanna vachanagalu in kannada class 12 2nd puc kannada vachanagalu bhavartha
೦೨. ವಚನಗಳು
(ಅ) ಬಸವಣ್ಣನವರ ವಚನಗಳು

ಕವಿ ಪರಿಚಯ:
ಸಾಮಾನ್ಯವಾದ ವೈದಿಕ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿ ಮಂತ್ರಿಯ ಪದವಿಗೇರಿದ ಬಸವಣ್ಣನವರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಪ್ರಪಂಚದಲ್ಲಿ ಬಹುದೊಡ್ಡ ಸಾಧನೆಯನ್ನು ಮಾಡಿದರು. ಕ್ರಿ.ಶ. ಹನ್ನೆರಡನೆಯ ಶತಮಾನದಲ್ಲಿ ಜೀವಿಸಿದ್ದ ಬಸವಣ್ಣನವರು ಬಾಲ್ಯದಲ್ಲಿ ತಾಯಿ-ತಂದೆಯರು ಒತ್ತಾಯಪಡಿಸಿದ ವೈದಿಕ ಸಂಪ್ರದಾಯಾಚರಣೆಗಳಿಗೆ ತಲೆಬಾಗದೆ, ಮನೆಬಿಟ್ಟು ಕೂಡಲ ಸಂಗಮ ಕ್ಷೇತ್ರದಲ್ಲಿ ಶಿವನನ್ನು ಕುರಿತು ಧ್ಯಾನಮಾಡಿ, ಭಗವಂತನ ಸಾಕ್ಷಾತ್ಕಾರವನ್ನು ಪಡೆದು ಕೊಂಡರೆಂಬ ಐತಿಹ್ಯವಿದೆ. ತರುವಾಯ ಬಸವಣ್ಣನವರು ಕೂಡಲಸಂಗಮದಿಂದ ಕಲ್ಯಾಣನಗರಕ್ಕೆ ತೆರಳಿ ಬಿಜ್ಜಳನ ಅರಮನೆಯಲ್ಲಿ ಲೆಕ್ಕಿಗನ ಹುದ್ದೆಯನ್ನು ವಹಿಸಿಕೊಂಡು ಕಾಲಾನುಕ್ರಮದಲ್ಲಿ ಪ್ರಗತಿಯನ್ನು ಸಾಧಿಸಿ, ಬಿಜ್ಜಳನ ಕೃಪೆಯನ್ನು ಹೊಂದಿ ಮಂತ್ರಿ (ಕೋಶಾಧಿಕಾರಿ)ಯ ಸ್ಥಾನವನ್ನು ಗಳಿಸಿಕೊಂಡರು.
ಬಸವಣ್ಣನವರು ಅತ್ಯಂತ ಮೌಲಿಕವಾದ ವಚನಗಳನ್ನು ಬರೆದಿದ್ದಾರೆ. ಇವುಗಳಲ್ಲಿ ಸಾಮಾಜಿಕ, ಆಧ್ಯಾತ್ಮಿಕ, ತಾತ್ವಿಕ ಮೌಲ್ಯಗಳಿದ್ದು ಹಲವು ವಚನಗಳು ಕಾವ್ಯಮಯವಾಗಿರುವುದನ್ನು ಗುರುತಿಸಬಹುದಾಗಿದೆ. ಪಂಪಾದಿ ಕವಿಗಳ ಕಾವ್ಯಗಳ ಸಾಲುಗಳನ್ನು ಕೇಳದಿರುವ ಕನ್ನಡಿಗರಿರುವರೇ ವಿನಃ ಬಸವಾದಿ ಶಿವಶರಣರ ವಚನಗಳ ಸಾಲುಗಳನ್ನು ಕೇಳದಿರುವ ಕನ್ನಡಿಗರಿಲ್ಲವೆನ್ನಬಹುದು. ಬಸವಣ್ಣನವರು ‘ಕೂಡಲಸಂಗಮದೇವ’ ಎಂಬ ಅಂಕಿತದಲ್ಲಿ ವಚನಗಳನ್ನು ರಚಿಸಿದ್ದಾರೆ.
ಅಭ್ಯಾಸ
(ಅ) ಸಾಂದರ್ಭಿಕ ವಿವರಣೆಯನ್ನು ಬಯಸುವ ವಾಕ್ಯಗಳು
೧. ಅರ್ಥರೇಖೆಯಿದ್ದಲ್ಲಿ ಫಲವೇನು? ಆಯುಷ್ಯರೇಖೆ ಇಲ್ಲದನ್ನಕ್ಕ.
ಈ ಮೇಲಿನ ವಾಕ್ಯವನ್ನು ಬಸವಣ್ಣನವರ ವಚನದಿಂದ ಆಯ್ದುಕೊಳ್ಳಲಾಗಿದೆ. ಡಾಂಬಿಕ ಭಕ್ತಿಯನ್ನು ವಿಡಂಬಿಸುವ ಸಂದರ್ಭದಲ್ಲಿ ಕವಿ ಈ ಮೇಲಿನ ವಾಕ್ಯವನ್ನು ರಚಿಸಿದ್ದಾರೆ. ಲಿಂಗವನ್ನು ಮೈಮೇಲೆ ಧರಿಸಿ, ಶಿವಭಕ್ತನೆಂದು ತೋರಿಕೆಯ ಭಕ್ತಿ ಆಚರಿಸುವುದಕ್ಕಿಂತ ಶಿವಪಥದಲ್ಲಿ ನಡೆಯುವುದು ಮುಖ್ಯವೆಂಬುದು ಬಸವಣ್ಣನವರ ಅಭಿಪ್ರಾಯವಾಗಿದೆ. ಆಯುಷ್ಟವಿಲ್ಲದವನ ಕೈಯಲ್ಲಿ ಅರ್ಥರೇಖೆಯಿದ್ದ ಮಾತ್ರಕ್ಕೆ ಸುಖಿಸಬಲ್ಲನೆ? ಅರ್ಥ (ಸಂಪತ್ತನ್ನು) ವನ್ನು ಅನುಭವಿಸಲು ಆಯುಷ್ಕ ಮುಖ್ಯ ಅಂತೆಯೇ ಅಂಗದ ಮೇಲೆ ಶಿವಲಿಂಗವಿದ್ದ ಮಾತ್ರಕ್ಕೆ ಉಪಯೋಗವಿಲ್ಲ, ಶಿವಪಥವನ್ನು ಅರಿತು ನಡೆಯುವುದು ನಿಜಭಕ್ತನ ಲಕ್ಷಣ ಎಂದು ಬಸವಣ್ಣನವರು ತಿಳಿಸಿದ್ದಾರೆ.
೨. ಮರ್ಕಟನ ಕೈಯಲ್ಲಿ ಮಾಣಿಕ್ಯವಿದ್ದು ಫಲವೇನು?
ಬಸವಣ್ಣನವರ ವಚನವೊಂದರಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ. ಮರ್ಕಟ ಎಂದರೆ ಮಂಗ ಅಥವಾ ಕೋತಿ. ಕೋತಿಗೆ ಮಾಣಿಕ್ಯದ ಬೆಲೆ ತಿಳಿಯದು. ಹಾಗಾಗಿ ತನ್ನ ಕೈಯೊಳಗಿರುವ ಮಾಣಿಕ್ಯವನ್ನು ಅದು ಕಲ್ಲಿನಂತಹ ಕ್ಷುಲ್ಲಕ ನಿರುಪಯುಕ್ತ ವಸ್ತು ಎಂದೇ ಭಾವಿಸುತ್ತದೆ. ಇದೇ ರೀತಿಯಲ್ಲಿ ಲಿಂಗದ ಮೌಲ್ಯ-ಮಹತ್ತ್ವ ತಿಳಿಯದ ಡಾಂಬಿಕ ಭಕ್ತ ತಾನು ಧರಿಸಿರುವ ಶಿವಲಿಂಗದ ಮಹತ್ವವನ್ನರಿಯದೆ ವರ್ತಿಸುತ್ತಾನೆ. ಇದರಿಂದ ಯಾವ ಉಪಯೋಗವೂ ಇಲ್ಲ, ಇಂತಹ ಡಾಂಬಿಕನ ಅಂಗದ ಮೇಲೆ ಲಿಂಗವಿರುವುದು ಮರ್ಕಟನ ಕೈಯೊಳಗಣ ಮಾಣಿಕ್ಯದಂತೆ ಎಂಬುದು ಬಸವಣ್ಣನವರ ಅಭಿಪ್ರಾಯ.
೩. ಧರೆ ಹತ್ತಿ ಉರಿದಡೆ ನಿಲಲುಬಾರದು.
ಬಸವಣ್ಣನವರ ಪ್ರಸಿದ್ಧವಾದ ವಚನವೊಂದರ ವಾಕ್ಯವಿದು. ಕಾಯಬೇಕಾದ ದೇವರೇ ಕೊಳ್ಳಲು ನಿರ್ಧರಿಸಿದಾಗ ಯಾರಿಂದಲೂ ರಕ್ಷಿಸಲು ಸಾಧ್ಯವಿಲ್ಲವೆಂಬುದನ್ನು ವಿವರಿಸುವ ಸಂದರ್ಭದಲ್ಲಿ ಬಸವಣ್ಣ ಈ ಮಾತನ್ನು ಹೇಳಿದ್ದಾರೆ. ಮನೆಯೊಳಗಿರುವ ಒಲೆ ಹತ್ತಿ ಉರಿಯುತ್ತಿದ್ದಾಗ ಅದರ ಶಾಖವನ್ನು ತಾಳಿಕೊಂಡು ನಿಲ್ಲಬಹುದು. ಆದರೆ ನಾವು ನಿಂತಿರುವ ನೆಲವೇ ಹತ್ತಿ ಉರಿಯತೊಡಗಿದರೆ ತಾಳೆನಿಲ್ಲಲು, ಬದುಕುಳಿಯಲು ಅಸಾಧ್ಯವೆಂಬುದು ಬಸವಣ್ಣನವರ ಅಭಿಪ್ರಾಯ. ಇದನ್ನು ಇನ್ನಿತರ ಉದಾಹರಣೆಗಳ ಮೂಲಕ ಅವರು ನಿರೂಪಿಸಿದ್ದಾರೆ.
೪. ತಾಯ ಮೊಲೆವಾಲು ನಂಜಾಗಿ ಕೊಲುವಡೆ.
ಬಸವಣ್ಣನವರ ವಚನದಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ. ತಾಯ ಗರ್ಭದಿಂದ ಹೊರಬಂದ ಕೂಡಲೇ ಮಗು ಕಾತರಿಸುವುದು ತಾಯಿಯ ಎದೆಹಾಲಿಗೆ, ತಾಯಿ ಹಾಲು ಕುಡಿಸಿ ಮಗುವನ್ನು ಪೊರೆಯುತ್ತಾಳೆ. ಅವಳು ಕುಡಿಸುವ ಎದೆಹಾಲು ಮಗುವಿನ ಪಾಲಿಗೆ ಅಮೃತವಿದ್ದಂತೆ. ಒಂದು ವೇಳೆ ಅವಳು ಕುಡಿಸುವ ಎದೆಹಾಲು ಅಮೃತವಾಗುವ ಬದಲಿಗೆ ವಿಷವಾದರೆ? ಯಾರೂ ಮಗುವನ್ನು ಉಳಿಸಲಾಗಲಿ, ಪೊರೆಯಲಾಗಲಿ ಸಾಧ್ಯವಿಲ್ಲ. ಇದರಂತೆಯೇ ತಾಯಿಯಂತೆ ಪೊರೆಮ ದೇವರೇ ಶಿಕ್ಷಿಸತೊಡಗಿದಾಗ ಯಾರಿಂದಲೂ ರಕ್ಷಿಸಲಾಗದೆಂಬುದನ್ನು ಬಸವಣ್ಣ ಈ ಮೇಲಿನ ವಾಕ್ಯದ ಮೂಲಕ ವಿವರಿಸಿದ್ದಾರೆ-
ಹೆಚ್ಚುವರಿ ಪ್ರಶ್ನೆಗಳು:
೫. ಎನ್ನಲ್ಲಿ ಇವಿಲ್ಲಾಗಿ ಆನು ಡಂಬಕ ಕಾಣಿರೇ.
ಬಸವಣ್ಣನವರು ಬರೆದಿರುವ ‘ಮನೆ ಮನ ಬೆರೆಸಿದಲ್ಲಿ…..’ ಎಂಬ ವಚನದಿಂದ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ. ಬಸವಣ್ಣನವರು ನೈಜಭಕ್ತಿಯ ಸ್ವರೂಪವನ್ನು ವಿವರಿಸುತ್ತಾ “ಭಕ್ತನ ಮನಸ್ಸು ದೇವನಲ್ಲಿ ಬೆರೆತಾಗ ಮನಸ್ಸು ಕರಗಬೇಕು. ಶಿವಲಿಂಗವನ್ನು ಮುಟ್ಟಿದಾಗ ರೋಮಾಂಚನ ಅಥವಾ ಪುಳಕಗೊಳ್ಳಬೇಕು. ಲಿಂಗವನ್ನು ಕಂಡಾಗ ಸಂತೋಷದಿಂದ ಕಣ್ಣೀರು ಸುರಿಸಬೇಕು. ಸ್ತೋತ್ರ ಮಾಡಿದಾಗ ಗಂಟಲು ಗದ್ಗದವಾಗಬೇಕು”, ಇವೆಲ್ಲವೂ ಕೂಡಲಸಂಗಮನನ್ನು ಆರಾಧಿಸುವ ಭಕ್ತನ ನಿಜಚಿಹ್ನೆಗಳು, ಇವೆಲ್ಲ ಇಲ್ಲದಿದ್ದರೆ ನಾನೊಬ್ಬ ಡಾಂಬಿಕ ಅಥವಾ ಬೂಟಾಟಿಕೆಯ ಭಕ್ತನಾಗುತ್ತೇನಲ್ಲವೆ? ಎಂದು ಪ್ರಶ್ನಿಸುವ ಸಂದರ್ಭದಲ್ಲಿ “ಎನ್ನಲ್ಲಿ ಇವಿಲ್ಲಾಗಿ, ಆನು ಡಾಂಬಿಕ ಕಾಣಿರೇ?” ಎಂಬ ಈ ಮೇಲಿನ ಮಾತನ್ನು ಹೇಳಿದ್ದಾರೆ. ನಿಜವಾದ ಭಕ್ತಿ ಯಾವ ಬಗೆಯದೆಂಬುದನ್ನು ವಿವರಿಸಿದ್ದಾರೆ.
(ಆ) ಒಂದು ಅಂಕದ ಪ್ರಶ್ನೆಗಳು (ಒಂದು ವಾಕ್ಯದಲ್ಲಿ ಉತ್ತರಿಸಿ)
೧. ತನು ಯಾವಾಗ ಕರಗಬೇಕು?
ಮನಮನ ಬೆರೆಸಿದಲ್ಲಿ
೨. ಯಾರ ಕೈಯಲ್ಲಿ ದರ್ಪಣವಿದ್ದು ಫಲವಿಲ್ಲ?
ಅಂಧಕನ
೩. ಶಿವಪಥವನ್ನು ಆರಿಯದಿದ್ದರೆ ಏನಾಗುವುದು?
ಕೈಯಲ್ಲಿ ಲಿಂಗವಿದ್ದು ಫಲವಿಲ್ಲ.
೪. ಬಸವಣ್ಣನವರ ವಚನಗಳ ಅಂಕಿತ ಯಾವುದು?
ಕೂಡಲಸಂಗಮದೇವ
ಹೆಚ್ಚುವರಿ ಪ್ರಶ್ನೆಗಳು:
೫. ಮಾಣಿಕ್ಕ ಯಾರ ಕೈಯಲ್ಲಿದ್ದು ಫಲವಿಲ್ಲ?
ಮರ್ಕಟ
೬. ಯಾರ ಕೈಯಲ್ಲಿ ಚಂದ್ರಾಯುಧವಿದ್ದು ಫಲವಿಲ್ಲ?
ಹೇಡಿ / ಹಂದೆಯ
೭. ಯಾವ ಗುಣವಿಲ್ಲದವನು ಡಾಂಬಿಕನೆನಿಸುತ್ತಾನೆ?
ನಿರಹಂಕಾರ
೮. ಯಾವುದು ಹತ್ತಿ ಉರಿದಡೆ ನಿಲಲುಬಾರದು?
ಧರೆ
(ಇ) ಎರಡು ಅಂಕಗಳ ಪ್ರಶ್ನೆಗಳು (ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ):
೧. ಯಾವ ಗುಣಗಳಿಲ್ಲದವನು ಡಾಂಬಿಕನೆನಿಸುತ್ತಾನೆ?
ನಿರಹಂಕಾರ, ಸಹಜೀವಿಗಳಲ್ಲಿ ಹೃದಯವೈಶಾಲ್ಯತೆ, ಶಿವಪಥವನ್ನರಿಯುವ ಗುಣಗಳಿಲ್ಲದವನು ಡಾಂಬಿಕನೆನಿಸುತ್ತಾನೆ.
೨. ಶಿವಪಥವನ್ನು ಆರಿಯದವನನ್ನು ಹೇಗೆ ವಿಡಂಬಿಸಲಾಗಿದೆ?
ಶಿವಪಥವನ್ನರಿಯದೆ ಕೈಯಲ್ಲಿ ಲಿಂಗಧರಿಸಿದವನನ್ನು ಚಂದ್ರಾಯುಧ ಹಿಡಿದ ಹೇಡಿಗೆ, ಕುರುಡನ ಕೈಯೊಳಗಣ ಕನ್ನಡಿಗೆ, ಕೈಯಲ್ಲಿ ಮಾಣಿಕ್ಯವಿಡಿದ ಮರ್ಕಟನಿಗೆ ಹೋಲಿಸಿ ವಿಡಂಬಿಸಲಾಗಿದೆ.
೩. ಯಾವಾಗ ನಿಲಬಹುದು? ಯಾವಾಗ ನಿಲಲಾಗದು?
ಒಲೆ ಹತ್ತಿ ಉರಿದಡೆ ನಿಲಬಹುದು, ಧರೆಹತ್ತಿ ಉರಿದೆಡೆ ನಿಲಲಾಗದು.
ಹೆಚ್ಚುವರಿ ಪ್ರಶ್ನೆಗಳು:
೪. ಏರಿ ಮತ್ತು ಬೇಲಿಯ ಕರ್ತವ್ಯವೇನು?
ಏರಿಯು ನೀರನ್ನು ಮತ್ತು ಬೇಲಿಯು ಪೈರನ್ನು ರಕ್ಷಿಸುತ್ತದೆ.
೫. ಹಂದೆ ಮತ್ತು ಅಂಧಕನ ಕೈಯಲ್ಲಿ ಏನೇನು ಇದ್ದು ಫಲವಿಲ್ಲ?
ಹಂದೆ(ಹೇಡಿ)ಯ ಕೈಯಲ್ಲಿ ಚಂದ್ರಾಯುಧವಿದ್ದು ಫಲವಿಲ್ಲ ಮತ್ತು ಅಂಧಕನ ಕೈಯಲ್ಲಿ ದರ್ಪಣವಿದ್ದು ಫಲವಿಲ್ಲ.
ಇ) ನಾಲ್ಕು ಅಂಕಗಳ ಪ್ರಶ್ನೆಗಳು (ಐದಾರು ವಾಕ್ಯಗಳಲ್ಲಿ ಉತ್ತರಿಸಿ):
೧. ಬಸವಣ್ಣನವರ ಪ್ರಕಾರ ನೈಜಭಕ್ತಿಯ ಲಕ್ಷಣಗಳಾವುವು?
ಬಸವಣ್ಣನವರ ಪ್ರಕಾರ ನೈಜ ಭಕ್ತಿಯ ಲಕ್ಷಣಗಳು ಹೀಗಿವೆ: ದೇವರು ಮತ್ತು ಭಕ್ತನ ಮನಗಳೆರಡೂ ಬೆರೆತಾಗ ದೇಹ ಕರಗಬೇಕು. ದೇವರ ವಿಗ್ರಹವನ್ನು ಸ್ಪರ್ಶಿಸಿದಾಗ ಭಕ್ತನಿಗೆ ರೋಮಾಂಚನ, ಪುಳಕವಾಗಬೇಕು. ವಿಗ್ರಹವನ್ನು ಕಂಡಾಗ ಸಂತೋಷದಿಂದ ಕಣ್ಣೀರು ಸುರಿಯಬೇಕು. ಸ್ತೋತ್ರ ಮಾಡುವಾಗ ಗಂಟಲು ಗದ್ದದವಾಗಬೇಕು. ಇವೆಲ್ಲವೂ ಕೂಡಲಸಂಗಮದೇವನನ್ನು ನಿಜವಾಗಿ ಆರಾಧಿಸುವವರ ಚಿಹ್ನೆಗಳು.
೨. ಶಿವಪಥವನ್ನರಿಯದವನ ಭಕ್ತಿ ನಿರರ್ಥಕವೆಂಬುದನ್ನು ಬಸವಣ್ಣನವರು ಯಾವ ಉದಾಹರಣೆಗಳ ಮೂಲಕ ವಿವರಿಸಿದ್ದಾರೆ?
ಶಿವಲಿಂಗವನ್ನು ಕೈಯಲ್ಲಿ ಹಿಡಿದುಕೊಂಡ ಮಾತ್ರಕ್ಕೆ ಆತ ಭಕ್ತನೆನಿಸುವುದಿಲ್ಲ. ನಿಜವಾದ ಭಕ್ತರೆನಿಸಬೇಕಾದರೆ ಶಿವಪಥವನ್ನು ಅರಿತುಕೊಳ್ಳುವುದು ಮುಖ್ಯವೆಂಬ ಅಭಿಪ್ರಾಯ ಬಸವಣ್ಣನವರದು. ಶಿವಪಥವನ್ನರಿಯದೆ ಶಿವಲಿಂಗವನ್ನು ಕೈಯಲ್ಲಿ ಹಿಡಿದುಕೊಳ್ಳುವುದನ್ನು ಆಯುಷ್ಯವಿಲ್ಲದವನ ಕೈಯೊಳಗಣ ಅರ್ಥರೇಖೆಗೂ ಹೇಡಿಯ ಕೈಯಲ್ಲಿರುವ ಚಂದ್ರಾಯುಧಕ್ಕೂ, ಕುರುಡನ ಕೈಯೊಳಗಿರುವ ಕನ್ನಡಿಗೂ, ಮರ್ಕಟ ಹಿಡಿದಿರುವ ಮಾಣಿಕ್ಯಕ್ಕೂ ಸಮೀಕರಿಸಿರುವ ಬಸವಣ್ಣನವರು ಈ ಎಲ್ಲ ಉದಾಹರಣೆಗಳಲ್ಲಿ ಕಂಡುಬರುವ ಅಪ್ರಯೋಜನದಂತೆ ಶಿವಪಥವನ್ನರಿಯದ ಶಿವಭಕ್ತನ ಕೈಯೊಳಗಣ ಶಿವಲಿಂಗ ಎಂದಿದ್ದಾರೆ. ಇದು ನಿರರ್ಥಕ ಭಕ್ತಿಯ ದಾರಿಯೆಂಬುದು ಅವರ ಖಚಿತಾಭಿಪ್ರಾಯವಾಗಿದೆ.
೩. ರಕ್ಷಿಸಬೇಕಾದವರೆ ಭಕ್ಷಕರಾದರೆ ಒದಗುವ ವಿಘಟನೆಯನ್ನು ಬಸವಣ್ಣನವರು ಹೇಗೆ ಚಿತ್ರಿಸಿದ್ದಾರೆ?
‘ರಕ್ಷಕರೇ ಭಕ್ಷಕರಾದಾಗ’, ‘ಬೇಲಿಯೇ ಎದ್ದು ಹೊಲ ಮೇಯ್ದಂತೆ” ಎಂಬ ಒಂದೇ ಅರ್ಥದ ಗಾದೆಮಾತುಗಳು ನಮ್ಮಲ್ಲಿ ಬಳಕೆಯಲ್ಲಿವೆ. ಕಾಯುವವರೇ ಕೊಲ್ಲಲು ತೀರ್ಮಾನಿಸಿದಾಗ ನಮ್ಮನ್ನು ಇನ್ಯಾರಿಂದಲೂ ರಕ್ಷಿಸಲಾಗುವುದಿಲ್ಲ. ಇದನ್ನು ಬಸವಣ್ಣ ಹಲವು ನಿದರ್ಶನಗಳೊಂದಿಗೆ ಸೊಗಸಾಗಿ ಚಿತ್ರಿಸಿದ್ದಾರೆ.
ಅಡುಗೆ ಮನೆಯಲ್ಲಿ ಒಲೆ ಉರಿಯುವುದು ಅಗತ್ಯ. ಆಗ ಒಲೆಯೆದುರು ನಿಲ್ಲುವ ಶಕ್ತಿ ನಮಗಿದೆ. ಆದರೆ ನಾವು ವಾಸಿಸುವ ಈ ಧರೆ ಹತ್ತಿ ಉರಿದರೆ ನಾವು ನಿಲ್ಲುವುದಾದರೂ ಎಲ್ಲಿ? ಕೆರೆಯ ಏರಿಯೇ ನೀರನ್ನೆಲ್ಲ ಕುಡಿದರೆ ಕರೆಯ ನೀರಿಗೆ ರಕ್ಷಣೆ ಇರದು. ಬೇಲಿ ಇರುವುದು ಬೆಳೆಯನ್ನು ರಕ್ಷಿಸಲು. ಅದೆ ಬೆಳೆಯನ್ನು ಮೇಯ್ದು ಹಾಕಿದರೆ ರಕ್ಷಣೆ ಹೇಗೆ? ಅದರಂತೆಯೇ ಮನೆಯನ್ನು ಪಾಲಿಸಬೇಕಾದ ಸದ್ಗುಣಗಳ ಗಣಿಯಾದ ಗೃಹಿಣಿಯ ಕಳ್ಳಿಯಾದರೆ? ಅಮೃತವಾಗಬೇಕಾದ ತಾಯಿಯ ಎದೆಹಾಲು ನಂಜಾಗಿ ಕೊಲ್ಲುವಂತಾದರೆ? – ಈ ಎಲ್ಲ ವಿಘಟನೆಗಳೂ ಕೂಡ ಕಾಯುವ ದೈವದ ಕೊಲ್ಲುವ ಬುದ್ದಿಯ ಸಂಕೇತವಾಗಿವೆ. ಹೀಗಾದಲ್ಲಿ ರಕ್ಷಿಸಲು ಇನ್ನಾರಿಗೂ ಸಾಧ್ಯವಿಲ್ಲ ಎಂಬುದನ್ನು ಬಸವಣ್ಣ ವಿವರಿಸಿದ್ದಾರೆ.
ಹೆಚ್ಚುವರಿ ಪ್ರಶ್ನೆಗಳು:
೪. ಬಸವಣ್ಣನವರ ವಚನಗಳ ಆಶಯವೇನು?
ಬಸವಣ್ಣನವರ ಮೂರು ವಚನಗಳಲ್ಲಿಯೂ ಭಕ್ತಿಯ ಪ್ರತಿಪಾದನೆ ಮುಖ್ಯವಾಗಿ ಕಂಡುಬರುತ್ತದೆ. ಲಿಂಗ ಮತ್ತು ಭಕ್ತನ ಸಂಬಂಧವು ಯಾವ ಬಗೆಯದಾಗಿರಬೇಕೆಂದು ವಿವರಿಸುವ ಬಸವಣ್ಣನವರು ಭಕ್ತಿಯ ಚಿಹ್ನೆಗಳನ್ನು ನಿರೂಪಿಸಿ, ಇವಿಲ್ಲದಿದ್ದರೆ ಅದು ಡಾಂಬಿಕ ಭಕ್ತಿ ಎಂದಿದ್ದಾರೆ. ಅಲ್ಲದ ಶಿವ ಪಥವನ್ನರಿಯದೆ ಕೈಯೊಳಗೆ ಲಿಂಗ ಹಿಡಿವುದು ವ್ಯರ್ಥವೆಂದು ಪ್ರತಿಪಾದಿಸಿದ್ದಾರೆ. ರಕ್ಷಿಸಬೇಕಾದ ದೈವವೇ ಕೊಲ್ಲಲು ನಿರ್ಧರಿಸಿದಾಗ ನಮ್ಮನ್ನು ರಕ್ಷಿಸುವವರು ಯಾರೂ ಇರುವುದಿಲ್ಲ. ಹೀಗಾಗಿ ಬದುಕಿನಲ್ಲಿ ನೈಜಭಕ್ತಿ ಪ್ರಾಮುಖ್ಯತೆಯನ್ನು ಪಡೆದಿದೆ ಎಂಬುದನ್ನು ಸಾರಿ ಹೇಳುವ ಬಸವಣ್ಣನವರು ತಮ್ಮ ವಚನಗಳಲ್ಲಿ ಭಕ್ತಿ ಆಚರಣೆಯ ನಿಜರೂಪವನ್ನು ಅರಿವು ಮಾಡಿಕೊಳ್ಳುವ ಆಶಯವನ್ನು ಹೊಂದಿದ್ದಾರೆ.
ಭಾಷಾಭ್ಯಾಸ:
೧) ಅರ್ಥ, ಹತ್ತಿ, ಏರಿ – ಇವುಗಳ ನಾನಾರ್ಥಗಳನ್ನು ಬರೆಯಿರಿ.

೨) ಡಂಬಕ, ಹಂದೆ, ಮರ್ಕಟ, ನಂಜು – ಇವುಗಳ ಸಮಾನಾರ್ಥಕಗಳನ್ನು ಬರೆಯಿರಿ.
- ಡಂಬಕ – ಬೂಟಾಟಿಕೆಯವ
- ಹಂದೆ – ಹೇಡಿ, ಪುಕ್ಕಲ
- ಮರ್ಕಟ – ಮಂಗ, ಕೋತಿ, ವಾನರ
- ನಂಜು – ವಿಷ, ಪಾಷಾಣ
ಕೆಳಗಿನ ಪದ್ಯದ ಭಾವಾರ್ಥವನ್ನು ಬರೆಯಿರಿ:
೧. ಒಲೆಹತ್ತಿ ಉರಿದಡೆ ನಿಲಬಹುದಲ್ಲದೆ
ಧರೆಹತ್ತಿ ಉರಿದಡೆ ನಿಲಲುಬಾರದು.
ಏರಿ ನೀರುಂಬಡೆ, ಬೇಲಿ ಕೆಯ್ಯ ಮೇವಡೆ,
ನಾರಿ ತನ್ನ ಮನೆಯಲ್ಲಿ ಕಳುವಡೆ,
ತಾಯ ಮೊಲೆವಾಲು ನಂಜಾಗಿ ಕೊಲುವಡೆ
ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ ।
ಮಹತ್ತ್ವದ ವಚನಕಾರರೆನಿಸಿರುವ ‘ಬಸವಣ್ಣ’ನವರು ಬರೆದಿರುವ ವಚನವಿದಾಗಿದೆ. ಅತ್ಯಂತ ಪ್ರಸಿದ್ಧ ವಚನ ಎನಿಸಿದೆ.
ಅಡಿಗೆ ಮಾಡಲು ಒಲೆ ಹಚ್ಚುತ್ತೇವೆ. ಒಲೆ ಹತ್ತಿ ಉರಿಯುತ್ತಿರುವಾಗ ನಾವು ಅಲ್ಲಿ ನಿಂತು ಅದರ ಬಿಸಿಯನ್ನು ತಾಳಿಕೊಳ್ಳಬಹುದು. ಆದರೆ ನಾವು ನಿಂತಿರುವ ಭೂಮಿಯೇ ಹತ್ತಿ ಉರಿದರೆ ನಿಲ್ಲಲು ಸಾಧ್ಯವಿಲ್ಲ. ಭೂಮಿ ಇರುವುದೇ ನಮ್ಮ ಬದುಕಿನ ನೆಲೆಗಾಗಿ. ಅದೇ ರೀತಿಯಲ್ಲಿ ಕೆರೆಯ ಏರಿ ಇರುವುದು ಕೆರೆಯೊಳಗಿನ ನೀರನ್ನು ರಕ್ಷಿಸಲು, ಆದರೆ ಏರಿಯೇ ನೀರನ್ನು ಕುಡಿದರೆ ಏನು ಮಾಡುವುದು? ಪೈರಿನ ರಕ್ಷಣೆಗೆಂದು ಹಾಕಿದ ಬೇಲಿಯು ರಕ್ಷಿಸುವ ಬದಲು ಪೈರಿನ ಭಕ್ಷಣೆ ಮಾಡಿದರೆ? ಹೆಣ್ಣು ಮನೆಯನ್ನು ಕಾಪಾಡಬೇಕಾದವಳು. ಆದರೆ ಅವಳೇ ತನ್ನ ಮನೆಯಲ್ಲಿ ಕಳ್ಳತನ ಮಾಡಿದರೆ ಗತಿಯೇನು?
ಇದೇ ರೀತಿಯಲ್ಲಿ ತಾಯಿಯ ಮೊಲೆ ಹಾಲನ್ನು ಕುಡಿದು ಮಗು ಬೆಳೆಯಬೇಕಾದ್ದು ನಿಸರ್ಗ ಸಹಜ ವ್ಯಾಪಾರ ಆದರೆ ಆ ಮೊಲೆ ಹಾಲು ವಿಷವಾಗಿ ಮಗುವನ್ನು ಕೊಂದರೆ, ಕಾಪಾಡುವವರು ಯಾರು? ಎಂಬುದಾಗಿ ಬಸವಣ್ಣನವರು ಪ್ರಶ್ನಿಸಿದ್ದಾರೆ. ಕಾಯಬೇಕಾದ ಶಕ್ತಿಗಳು ಕೊಲ್ಲುವಂತಾದರೆ ನಮ್ಮನ್ನು ರಕ್ಷಿಸಲು ಯಾರಿಂದಲೂ ಸಾಧ್ಯವಿಲ್ಲ. ಇದೊಂದು ವೈರುಧ್ಯದ ಸಂಗತಿ ಎನಿಸುತ್ತದೆ. ಕಾಯಬೇಕಾದವರು ಸದಾ ಕಾಯಬೇಕೇ ವಿನಹ ಕೊಲ್ಲಬಾರದು. ಹಾಗೆ ಮಾಡಿದರೆ ಬದುಕಲು ಅಸಾಧ್ಯವೆಂಬುದು ಈ ವಚನದ ಆಶಯವಾಗಿದೆ.
ವಚನಗಳ ಸಾರಾಂಶ ಮತ್ತು ವಿಮರ್ಶೆ
ಭಕ್ತಿಭಂಡಾರಿ ಬಸವಣ್ಣನವರ ವಚನಗಳು ಆಧ್ಯಾತ್ಮ ಮತ್ತು ವ್ಯಕ್ತಿತ್ವ ವಿಕಸನದ ಮೂಲಕ ಸಾಮಾಜಿಕ ಸಾಮರಸ್ಯದ ಮಹತ್ತ್ವವನ್ನು ಸಾರುತ್ತವೆ. ಪ್ರಸ್ತುತ ವಚನದಲ್ಲಿ ನಿಜವಾದ ಭಕ್ತನ ಲಕ್ಷಣಗಳನ್ನು ವಿವರಿಸಲಾಗಿದೆ.
೧) ಮನಮನ ಬೆರೆಸಿದಲ್ಲಿ ತನು ಕರಗದಿದ್ದಡೆ,
ಸೋಂಕಿನಲ್ಲಿ ಪುಳಕಂಗಳ ಹೊರಹೊಮ್ಮದಿದ್ದಡೆ
ಕಂಡಾಗಳಶ್ರುಜಲಂಗಳು ಸುರಿಯದಿದ್ದಡೆ,
ನುಡಿವಲ್ಲಿ ಗದ್ಗದಂಗಳು ಪೊಣ್ಯದಿದ್ದಡೆ:
ಕೂಡಲಸಂಗಮದೇವರ ಭಕ್ತಿಗಿದು ಚಿಹ್ನೆ?
ಎನ್ನಲ್ಲಿ ಇವಿಲ್ಲಾಗಿ, ಅನು ಡಂಬಕ ಕಾಣಿರೇ!
ಪ್ರಸ್ತುತ ವಚನದಲ್ಲಿ ಬಸವಣ್ಣನವರು ನೈಜಭಕ್ತಿಯ ಸ್ವರೂಪವನ್ನು ವಿವರಿಸಿದ್ದಾರೆ. ದೇವರ ಮತ್ತು ಭಕ್ತನ ಮನಗಳೆರಡೂ ಬೆರೆತಾಗ ದೇಹ ಕರಗಬೇಕು, ದೇವರ ವಿಗ್ರಹವನ್ನು ಭಕ್ತ ಮುಟ್ಟಿದಾಗ ಅವನಿಗೆ ರೋಮಾಂಚನ, ಪುಳಕವಾಗಬೇಕು. ಅದನ್ನು ಕಂಡಾಗ ಸಂತೋಷದಿಂದ ಕಣ್ಣಿನಿಂದ ನೀರು ಸುರಿಯಬೇಕು. ಸ್ತೋತ್ರ ಮಾಡುವಾಗ ಗಂಟಲು ಗದ್ಗದವಾಗಬೇಕು. ಇದೆಲ್ಲವೂ ಕೂಡಲಸಂಗಮದೇವನನ್ನು ನಿಜವಾಗಿ ಆರಾಧಿಸುವುದರ ಚಿಹ್ನೆಗಳು. ನನ್ನಲ್ಲಿ ಇವೆಲ್ಲ ಇಲ್ಲವಾಗಿ ನಾನೊಬ್ಬ ಬೂಟಾಟಿಕೆಯವನಾಗಿದ್ದೇನೆ ಎಂದು ಬಸವಣ್ಣನವರು ಹಲುಬಿದ್ದಾರೆ.
ಶಬ್ದಾರ್ಥ: ಸೋಂಕು-ಮುಟ್ಟು, ತಗಲು; ತನು-ದೇಹ, ಶರೀರ; ಪುಳಕ-ರೋಮಾಂಚನ: ಹೊರಹೊಮ್ಮು-ಪ್ರಕಟಗೊಳ್ಳು: ಅಶ್ರುಜಲ-ಆನಂದದ ಕಣ್ಣೀರು; ನುಡಿವಲ್ಲಿ-ಮಾತನಾಡುವಾಗ; ಗದ್ಗದ-ಗಂಟಲು ತೇವಗೊಳ್ಳು; ಪೊಣ್ಣು-ಹೊಮ್ಮು: ಚಿಕ್ಕ-ಚಿಹ್ನೆ, ಸಂಕೇತ; ಡಂಬಕ-ತೋರಿಕೆಯ ಭಕ್ತ.
೨) ಅರ್ಥರೇಖೆಯಿದ್ದಲ್ಲಿ ಫಲವೇನು, ಆಯುಷ್ಕರೇಖೆ ಇಲ್ಲದನ್ನಕ್ಕರ
ಹಂದೆಯ ಕೈಯಲ್ಲಿ ಚಂದ್ರಾಯುಧವಿದ್ದಲ್ಲಿ ಫಲವೇನು?
ಅಂಧಕನ ಕೈಯಲ್ಲಿ ದರ್ಪಣವಿದ್ದು ಫಲವೇನು?
ಮರ್ಕಟನ ಕೈಯಲ್ಲಿ ಮಾಣಿಕವಿದ್ದು ಫಲವೇನು?
ನಮ್ಮ ಕೂಡಲಸಂಗನ ಶರಣರನರಿಯದವರ ಕೈಯಲ್ಲಿ
ಲಿಂಗವಿದ್ದು ಫಲವೇನು? ಶಿವಪಥವನರಿಯದನ್ನಕ್ಕ.
ಪ್ರಸ್ತುತ ವಚನದಲ್ಲಿ ಬಸವಣ್ಣನವರು ಮೂಲದಲ್ಲಿ ಸತ್ವವಿರದ ತೋರಿಕೆಯ ಭಕ್ತಿಯನ್ನು ವ್ಯಂಗ್ಯವಾಡಿದ್ದಾರೆ. ಶಿವಪರವನ್ನರಿಯದವನು ಕೈಯಲ್ಲಿ ಲಿಂಗವನ್ನು ಹಿಡಿದುಕೊಂಡು ಫಲಪುಷ್ಪಗಳಿಂದ ಅರ್ಚಿಸಿದ ಮಾತ್ರಕ್ಕೆ ಅದು ಸದ್ಭಕ್ತಿಯ ಲಕ್ಷಣವಲ್ಲ. ಶಿವವಥವನ್ನು ಅರಿತುಕೊಳ್ಳುವುದು ಮುಖ್ಯವೆಂಬುದು ಬಸವಣ್ಣನವರ ಅಭಿಪ್ರಾಯ. ಅವನ್ನು ಹಲವಾರು ನಿದರ್ಶನಗಳ ಮೂಲಕ ನಿರೂಪಿಸಿದ್ದಾರೆ. ಮನುಷ್ಯನ ಕೈಯಲ್ಲಿ ಅರ್ಥರೇಖೆಯಿರಬಹುದು, ಆದರೆ ಅನುಭವಿಸಲು ಆಯಸ್ಸು ಮುಖ್ಯವಲ್ಲವೆ? ವೀರನ ಕೈಯಲ್ಲಿ ಚಂದ್ರಾಯುಧವಿದ್ದರೆ ಉಪಯುಕ್ತವಾದೀತು. ಆದರೆ ಹೇಡಿಯಾದವನ ಕೈಯಲ್ಲಿದ್ದರೆ ನಿರುಪಯುಕ್ತ ಅದೇ ರೀತಿ ಕುರುಡನ ಕೈಯಲ್ಲಿ ಕನ್ನಡಿ ಇರುವುದರಿಂದ ಯಾವ ಪ್ರಯೋಜನವೂ ಇಲ್ಲ ಕಾಣುವ ಕಣ್ಣೆ ಇಲ್ಲದ ಮೇಲೆ ಕನ್ನಡಿಯನ್ನು ಉಪಯೋಗಿಸುವ ಪುಶ್ನೆಯೇ ಎದುರಾಗದು. ಹಾಗೆಯೇ ಮಾಣಿಕ್ಯದ ಬೆಲೆ ತಿಳಿಯದ ಮಂಗನ ಕೈಯಲ್ಲಿ ಮಾಣಿಕ್ಯವಿದ್ದರೆ ವ್ಯರ್ಥ – ಇವುಗಳಂತೆಯೇ ಶಿವಪಥವನ್ನರಿಯದ ಡಾಂಬಿಕನ ಬಳಿಯಲ್ಲಿ ಲಿಂಗವಿದ್ದ ಮಾತ್ರಕ್ಕೆ ಯಾವ ಪ್ರಯೋಜನವೂ ಇಲ್ಲ. ಲಿಂಗಧಾರಣೆಗಿಂತ ಶಿವವುದಲ್ಲಿ ನಡೆಯುವುದು ಮುಖ್ಯವೆಂಬುದು ಬಸವಣ್ಣನವರ ಅಭಿಪ್ರಾಯವಾಗಿದೆ.
ಶಬ್ದಾರ್ಥ: ಅರ್ಥ – ಹಣ, ಸಂಪತ್ತು; ಫಲವೇನು – ಪ್ರಯೋಜನವೇನು?; ಹಂದೆ – ಹೇಡಿ; ಅಂಧಕ – ಕುರುಡ; ದರ್ಪಣ – ಕನ್ನಡಿ: ಮರ್ಕಟ – ಮಂಗ; ಮಾಣಿಕ – ಮಾಣಿಕ್ಯ, ನವರತ್ನಗಳಲ್ಲಿ ಒಂದು; ಶಿವಪಥ-ಲಿಂಗಾಚಾರದ ಮಾರ್ಗ; ಅರಿಯದನ್ನಕ್ಕ – ಅರಿತುಕೊಳ್ಳುವವರೆಗೆ.
೩) ಒಲೆಹತ್ತಿ ಉರಿದಡೆ ನಿಲಬಹುದಲ್ಲದೆ
ಧರೆಹತ್ತಿ ಉರಿದಡೆ ನಿಲಲುಬಾರದು.
ಏರಿ ನೀರುಂಬಡೆ, ಬೇಲಿ ಕೆಯ್ಯ ಮೇವಡೆ,
ನಾರಿ ತನ್ನ ಮನೆಯಲ್ಲಿ ಕಳುವಡೆ,
ತಾಯ ಮೊಲೆವಾಲು ನಂಜಾಗಿ ಕೊಲುವಡೆ,
ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ!
ಕಾಯಬೇಕಾದ ದೇವರೇ ಕೊಲ್ಲುವ ನಿರ್ಧಾರ ಮಾಡಿದಾಗ ರಕ್ಷಿಸಲು ಇನ್ಯಾರಿಂದಲೂ ಸಾಧ್ಯವಿಲ್ಲವೆಂಬುದನ್ನು ಬಸವಣ್ಣನವರು ಪ್ರಸ್ತುತ ವಚನದಲ್ಲಿ ಹಲವು ಉದಾಹರಣೆಗಳ ಮೂಲಕ ಸೊಗಸಾಗಿ ನಿರೂಪಿಸಿದ್ದಾರೆ. ಅಡುಗೆ ಮನೆಯೊಳಗಿರುವ ಒಲೆಯು ಹತ್ತಿ ಉರಿಯುತ್ತಿದ್ದಾಗ ನಾವು ಅದರ ಶಾಖವನ್ನು ತಾಳಿಕೊಂಡು ನಿಲ್ಲಬಹುದು. ಅದರ ಉಪಯೋಗವನ್ನೂ ಪಡೆದುಕೊಳ್ಳಬಹುದು, ಆದರೆ ನಾವು ಜೀವಿಸುತ್ತಿರುವ ನೆಲವೇ ಹತ್ತಿ ಉರಿಯತೊಡಗಿದರೆ ಆಶ್ರಯಕ್ಕೆ ನಾವು ಎಲ್ಲಿಗೆ ಹೋಗಬೇಕು? ನೀರಿನ ರಕ್ಷಣೆಗಾಗಿ ಕಟ್ಟಿದ ಐರಿಯೇ ನೀರನ್ನು ಕುಡಿದುಬಿಟ್ಟರೆ, ರಕ್ಷಣೆಗೆಂದು ನಿರ್ಮಿಸಿದ ಬೇಲಿಯೇ ಬೆಳೆಯನ್ನು ಮೇಯ್ದಡೆ, ಗೃಹಿಣಿಯಾದವಳು ಸದ್ಗುಣಗಳನ್ನು ತೊರೆದು ಮನೆಯಲ್ಲಿ ಕಳ್ಳತನ ಮಾಡಿದರೆ, ಶಿಶುವನ್ನು ಪೊರೆಯಬೇಕಾದ ತಾಯಿಯ ಮೊಲೆಹಾಲು ವಿಷವಾಗಿಬಿಟ್ಟರೆ – ರಕ್ಷಿಸುವುದು ಯಾರಿಂದಲೂ ಸಾಧ್ಯವಿಲ್ಲ, ಕಷ್ಟಬಂದಾಗ ರಕ್ಷಣೆಗೆ ದೇವರ ಮೊರೆ ಹೋಗುವುದು ಸಹಜ, ಆದರೆ ಆತನೇ ಕಷ್ಟಕೊಟ್ಟಾಗ ನಾವು ಯಾರಿಗೆ ದೂರನ್ನು ಸಲ್ಲಿಸುವುದೆಂದು ಬಸವಣ್ಣನವರು ಪ್ರಶ್ನಿಸಿದ್ದಾರೆ.
ಶಬ್ದಾರ್ಥ: ಧರೆ-ಭೂಮಿ, ನೆಲ: ಏರಿ-ಕೆರೆಯ ದಂಡೆ: ಉಂಬು-ತಿನ್ನು ಸೇವಿಸು: ಉಂಬಡೆ-ಕುಡಿಯಲು; ಬಾರದು. ಬರುವುದಿಲ್ಲ: ಕೆಯ್ಯ-ಬೆಳೆ: ಮೇವಡ-ಮೇಯಲು: ನಾರಿ-ಹೆಣ್ಣು, ಗೃಹಿಣಿ; ಕಳುವಡೆ-ಕಳ್ಳತನ ಮಾಡಲು: ನಂಜು-ವಿಷ
ಹೊಂದಿಸಿ ಬರೆಯುವುದಕ್ಕೆ ಬೇಕಾದ ಮಾಹಿತಿ
- ಬಸವಣ್ಣ – ವಚನಗಳು
- ಬಸವಣ್ಣ – ಭಕ್ತಿ ಭಂಡಾರಿ
- ಬಸವಣ್ಣ – ಕೂಡಲಸಂಗಮದೇವ
- ಬಸವಣ್ಣ – ಬಾಗೇವಾಡಿ
(ಆ) ಉರಿಲಿಂಗಪೆದ್ದಿಯ ವಚನಗಳು
ಕವಿ ಪರಿಚಯ
ಅಲಕ್ಷಿತ ವಚನಕಾರರಲ್ಲಿ ಉರಿಲಿಂಗಪೆದ್ದಿ ಮುಖ್ಯನಾದವನು. ತಂದೆ-ತಾಯಿಗಳು ಈತನಿಗೆ ‘ಪೆದ್ದನ್ನ’ ಎಂದು ಹೆಸರಿಟ್ಟಿದ್ದರು. ಕಳ್ಳತನ ಇವನ ಕಸುಬಾಗಿತ್ತು. ಈತ ಒಮ್ಮೆ ಕಳ್ಳತನಕ್ಕೆಂದು ಉರಿಲಿಂಗದೇವರ ಮನೆಗೆ ತೆರಳಿದಾಗ ಅಲ್ಲಿನ ವಾತಾವರಣದಿಂದ ಈತನ ಮನಃಪರಿವರ್ತನೆಯಾಯಿತು. ಕಳ್ಳತನವನ್ನು ತೊರೆದು ಮಠಕ್ಕೆ ಕಾಡಿನಿಂದ ಸೌದೆ ತಂದು ಹಾಕತೊಡಗಿದ. ಒಂದು ದಿನ ಗುರುಕೃಪೆ ದೊರೆತ ಪರಿಣಾಮ ಪೆದ್ದನ್ನ ‘ಉರಿಲಿಂಗಪೆದ್ದಿ’ಯಾದ. ಈತ ಬರೆದಿರುವ 366 ವಚನಗಳು ಉಪಲಬ್ದವಿದೆ. ತನ್ನ ವೈಚಾರಿಕ ಪ್ರಖರತೆಯಿಂದ ಉರಿಲಿಂಗಪೆದ್ದಿಯ ವಚನಗಳು ಗಮನ ಸೆಳೆಯುತ್ತವೆ.
ಅಭ್ಯಾಸ
(ಅ) ಸಾಂದರ್ಭಿಕ ವಿವರಣೆಯನ್ನು ಬಯಸುವ ವಾಕ್ಯಗಳು
೧. ಪುಷ್ಟವಿಲ್ಲದೆ ಪರಿಮಳವನ್ನರಿಯಬಹುದೆ?
ಉರಿಲಿಂಗಪೆದ್ದಿಯ ವಚನದಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ. ಮಹಾಘನ ನಿರಾಳನಾದ ಪೆರಶಿವನಿಂದ ಲಿಂಗವು ವೇದ್ಯವಾಗುವುದೆನ್ನುವುದನ್ನು ನಿರೂಪಿಸುವಾಗ ಕವಿಯು ನಿದರ್ಶನವಾಗಿ ಈ ಮೇಲಿನ ವಾಕ್ಯವನ್ನು ರಚಿಸಿದ್ದಾನೆ.
ಪುಷ್ಪವಿದ್ದರೆ ಸುಗಂಧದ ಅನುಭವ ನಮಗಾಗುತ್ತವೆ. ಪುಷ್ಪವೇ ಇಲ್ಲದಿದ್ದರೆ ಪರಿಮಳವನ್ನು ಅನುಭವಿಸಲು ಅರಿಯಲು ಹೇಗೆ ನಮಗೆ ಅಸಾಧ್ಯವೋ ಅದರಂತೆಯೇ ಪರಶಿವನಿಂದಾಗಿ ಲಿಂಗವು ಅನುಭವಕ್ಕೆ ಬರುತ್ತದೆಂದು ಕವಿ ಅಭಿಪ್ರಾಯ ಪಟ್ಟಿರುವನು ಹೂವು-ಪರಿಮಳಗಳು ಹೇಗೆ ಅಭಿನ್ನವೋ ಪರಶಿವ-ಲಿಂಗಗಳೂ ಭಿನ್ನವಲ್ಲವೆಂಬುದು ಆತನ ಅಭಿಪ್ರಾಯವಾಗಿದೆ.
೨. ಅನ್ಯ ಲಿಂಗಗಳ ನೆನೆವನೆ ನಿಮ್ಮ ಭಕ್ತನು?
ಈ ಮೇಲಿನ ವಾಕ್ಯವನ್ನು ಉರಿಲಿಂಗಪೆದ್ದಿಯ ವಚನದಿಂದ ಆಯ್ದುಕೊಳ್ಳಲಾಗಿದೆ. ಲಿಂಗಸಾಮಿಪ್ಯವು ಉಳಿದೆಲ್ಲವನ್ನೂ ಮರೆಯುವಂತೆ ನೆನೆಯದಂತೆ ಮಾಡುವುದೆಂಬುದನ್ನು ನಿರೂಪಿಸುವಾಗ ಕವಿ ಈ ಮೇಲಿನ ಮಾತನ್ನು ಹೇಳಿದ್ದಾನೆ.
ಪರುಷಗೃಹದಲ್ಲಿರುವವನು ಮನೆಮನೆ ತಿರುಗಿ ತಿರಿಯುವ (ಬೇಡುವ) ಅಗತ್ಯವಿಲ್ಲ. ತೊರೆಯೊಳಗಿರುವವನು ಕೆರೆಯ ನೀರನ್ನು ಬಯಸನು ಅದರಂತೆಯೇ ಮೈಮೇಲೆ ಲಿಂಗವನ್ನು ಧರಿಸಿದ ಮಹಾಭಕ್ತನು ಅನ್ಯಲಿಂಗಗಳನ್ನು ನೆನೆಯುವುದಿಲ್ಲ ಎಂದು ಉರಿಲಿಂಗಪೆದ್ದಿಯು ಅಭಿಪ್ರಾಯ ಪಟ್ಟಿರುವನು.
೩. ತಾನೆ ಲಘುಮಾಡಿ ಲಘುವಾದನಯ್ಯ.
ಈ ಮೇಲಿನ ವಾಕ್ಯವನ್ನು ಉರಿಲಿಂಗಪೆದ್ದಿಯ ವಚನದಿಂದ ಆಯ್ದುಕೊಳ್ಳಲಾಗಿದೆ. ಗುರುವು ಲಘುವಾದ ರೀತಿಯಲ್ಲಿ ವರ್ತಿಸಬಾರದೆಂಬುದನ್ನು ನಿರೂಪಿಸುವಾಗ ಕವಿಯು ಈ ವಾಕ್ಯವನ್ನಾಡಿದ್ದಾನೆ.
ಗುರುವಿನ ಸ್ಥಾನ ಹಿರಿದು ತನ್ನ ಸಚ್ಚಾರಿತ್ರ್ಯ ವರ್ತನೆ ಮತ್ತು ವ್ಯಕ್ತಿತ್ವಗಳಿಂದ ಆತ ಸದಾ ತನ್ನ ಗುರುಸ್ಥಾನದ ಘನತೆಯನ್ನು ಕಾಯ್ದುಕೊಳ್ಳಬೇಕು. ಆ ಮೂಲಕ ತನ್ನ ಶಿಷ್ಯರಿಗೆ ಹಾಗೂ ಸಮಾಜಕ್ಕೆ ಮಾದರಿಯಾಗಿ ಬದುಕಬೇಕು. ಗುರುವು ಲಘುವರ್ತನೆಯನ್ನು ತೋರಿದರೆ ಅವನು ಉಳಿದವರ ದೃಷ್ಟಿಯಲ್ಲಿ ಲಘುವಾಗಿ ಹೋಗುತ್ತಾನೆ ಆದ್ದರಿಂದ ಹಗುರವಾದ ನಡವಳಿಕೆಯನ್ನು ತೋರದ ಘನವ್ಯಕ್ತಿತ್ವವನ್ನು ಕಾಯ್ದುಕೊಳ್ಳುವುದು ನಿಜವಾದ ಗುರುವಾದವನ ಕರ್ತವ್ಯವಾಗಿದೆ ಎಂಬುದನ್ನು ಕವಿಯು ಇಲ್ಲಿ ವಿವರಿಸಿ ಹೇಳಿದ್ದಾನೆ.
ಹೆಚ್ಚುವರಿ ಪ್ರಶ್ನೆಗಳು:
೪. ಲಘು ಗುರುವಪ್ಪನೇ? ಗುರು ಲಘುವಪ್ಪನೇ?
ಉರಿಲಿಂಗಪೆದ್ದಿಯು ಬರೆದಿರುವ ಒಂದು ವಚನದಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ.
ಲಘು ಎಂದರೆ ಚಿಕ್ಕದು, ಗುರು ಎಂದರೆ ದೊಡ್ಡದು. ಗುರು ಲಘುವಾಗಲಾಗಲೀ, ಲಘು ಗುರುವಾಗಲಾಗಲೀ ಸಾಧ್ಯವಿಲ್ಲ. ಏಕೆಂದರೆ ಚಿಕ್ಕದು ಯಾವಾಗಲೂ ಚಿಕ್ಕದಾಗಿಯೇ, ದೊಡ್ಡದು ದೊಡ್ಡದಾಗಿಯೇ ಇರುತ್ತವೆ. ಹೀಗಿರುವಾಗ ಅವುಗಳ ಸ್ವಭಾವ ಬದಲಾಗಲು ಸಾಧ್ಯವಿಲ್ಲ. ಇದನ್ನರಿತು ಗುರುವಾದವನು ಘನತೆಯಿಂದ ತನ್ನ ಗುರುತನವನ್ನು ಕಾಯ್ದುಕೊಳ್ಳಬೇಕೇ ಹೊರತು, ಲಘುವಾಗಿ ವರ್ತಿಸಿ ತನ್ನ ಘನತೆಗೆ ಕುಂದು ತಂದುಕೊಳ್ಳಬಾರದೆಂಬುದು ಉರಿಲಿಂಗಪೆದ್ದಿಯ ವಿಚಾರವಾಗಿದೆ. ಅಲ್ಲದೆ ಗುರು-ಲಿಂಗ-ಜಂಗಮವೆಂಬ ತ್ರಿವಿಧವನ್ನು ಅರಿತು ನಡೆವವನು ಗುರುವೆನಿಸಿದರೆ, ಲಘುವಾಗಿ ಕಾಣುವವನು ಲಘುವೆನಿಸಿಕೊಳ್ಳುತ್ತಾನೆ ಎಂಬುದನ್ನು ವಿವರಿಸುವ ಸಂದರ್ಭದಲ್ಲಿ ವಚನಕಾರರು ಈ ಮೇಲಿನ ವಾಕ್ಯವನ್ನು ಪೀಠಿಕೆಯಾಗಿ ಬಳಸಿಕೊಂಡಿದ್ದಾರೆ.
೫. ತೊರೆಯೊಳಗಿದ್ದವನು ತೃಷೆಯಾಗಲರಸುವನೆ ಕೆರೆಯುದಕವ?
ಉರಿಲಿಂಗಪೆದ್ದಿ ಎಂಬ ವಚನಕಾರನು ಬರೆದಿರುವ ವಚನದಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ.
ಮಂಗಳ ಲಿಂಗವನ್ನು ಅಂಗದ ಮೇಲೆ ಧರಿಸಿರುವ ಭಕ್ತನು ಹೇಗೆ ಬೇರೆ ಅಂಗಗಳನ್ನು ನೆನೆಯುವುದಿಲ್ಲವೋ ಹಾಗೆ ಸಿಹಿನೀರಿನ ತೊರೆಯೊಳಗಿರುವವನು ಬಾಯಾರಿದಾಗ, ತೊರೆಯ ನೀರನ್ನು ಕುಡಿಯುತ್ತಾನೆಯೇ ಹೊರತು ಕೆರೆಯ ನಿಂತ ನೀರನ್ನು ಕುಡಿಯಲು ಬಯಸುವುದಿಲ್ಲ ಎಂಬುದನ್ನು ನಿರೂಪಿಸುವಾಗ ಕವಿಯು ಈ ಮೇಲಿನಂತೆ ನುಡಿದಿದ್ದಾನೆ. ಅನ್ಯಲಿಂಗ-ಮಂಗಳಲಿಂಗಗಳನ್ನು ಕೆರೆಯನೀರು-ತೊರೆಯ ನೀರಿಗೆ ಹೋಲಿಸಿರುವುದು ಸೊಗಸಾಗಿದೆ
(ಆ) ಒಂದು ಅಂಕದ ಪ್ರಶ್ನೆಗಳು (ಒಂದು ವಾಕ್ಯದಲ್ಲಿ ಉತ್ತರಿಸಿ)
೧. ಉರಿಲಿಂಗಪೆದ್ದಿಯ ವಚನಗಳ ಅಂಕಿತ ಯಾವುದು?
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ
೨. ಯಾವುದರಿಂದ ಪರಿಮಳವನ್ನು ಅರಿಯಬಹುದು?
ಪುಷ್ಪದಿಂದ
೩. ಯಾರು ಅನ್ಯಲಿಂಗವನ್ನು ನೆನೆಯುವುದಿಲ್ಲ?
ಅಂಗದ ಮೇಲೆ ಲಿಂಗ ಇದ್ದವನು
೪. ಗುರು ಹೇಗೆ ವರ್ತಿಸಬಾರದು?
ಲಘುವಾಗಿ
ಹೆಚ್ಚುವರಿ ಪ್ರಶ್ನೆಗಳು:
೫. ಗುರು ಲಘುವರ್ತನದಲ್ಲಿ ವರ್ತಿಸಿದರೆ ಏನು ಆಗದು?
ಆಚಾರ
೬. ಕೆರೆಯುದಕವನ್ನು ಅರಸದವನು ಯಾರು?
ತೊರೆಯೋಲಗಿದ್ದವನು
೭. ಮಹಾಘನ ನಿರಾಳ ಪರಶಿವನಿಂದ ಏನು ತೋರಿತು?
ಲಿಂಗ
(ಇ) ಎರಡು ಅಂಕಗಳ ಪ್ರಶ್ನೆಗಳು (ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ):
೧. ಸೂರ್ಯ ಮತ್ತು ದೀಪಗಳಿಂದಾಗುವ ಉಪಯೋಗಗಳಾವುವು?
ಸೂರ್ಯನಿಂದ ಹಗಲಿನ ಅನುಭವವೂ, ದೀಪದಿಂದ ಬೆಳಕಿನ ಉಪಯೋಗವೂ ಲಭಿಸುತ್ತದೆ.
೨. ಯಾರು ಮನೆಮನೆಯನ್ನು ತಿರಿಯನು? ಕೆರೆಯುದಕವನ್ನು ಅರಸದವನು ಯಾರು?
ಪರುಷದ ಮನೆಯೊಳಗಿದ್ದವನು ಮನೆಮನೆಯನ್ನು ತಿರಿಯುವುದಿಲ್ಲ. ತೊರೆಯೊಳಗಿದ್ದವನು ಕೆರೆಯುದಕವನ್ನು (ಕೆರೆಯ ನೀರನ್ನು) ಅರಸುವುದಿಲ್ಲ.
೩. ಗುರುವಿನ ಲಕ್ಷಣಗಳಾವುವು?
ಲಘುವಾಗಿ ವರ್ತಿಸದಿರುವುದು, ಗುರು-ಲಿಂಗ-ಜಂಗಮವೆಂಬ ತ್ರಿವಿಧವನ್ನು ಹಗುರವಾಗಿ ಭಾವಿಸದಿರುವುದು ಗುರುವಿನ ಲಕ್ಷಣಗಳಾಗಿವೆ.̈
(ಈ) ನಾಲ್ಕು ಅಂಕಗಳ ಪ್ರಶ್ನೆಗಳು (ಐದಾರು ವಾಕ್ಯಗಳಲ್ಲಿ ಉತ್ತರಿಸಿ):
೧. ಮಂಗಳಲಿಂಗದ ಮಹತ್ವವನ್ನು ಹೇಗೆ ವಿವರಿಸಲಾಗಿದೆ?
ಉರಿಲಿಂಗಪೆದ್ದಿಯು ಮಂಗಳಲಿಂಗದ ಮಹತ್ತ್ವವನ್ನು ತನ್ನ ವಚನದಲ್ಲಿ ಸರಳ-ಸುಂದರವಾಗಿ ವಿವರಿಸಿದ್ದಾರೆ. ಮಂಗಳ ಲಿಂಗವನ್ನು ಧರಿಸಿದವನು ಬೇರೆಯ ಲಿಂಗಗಳನ್ನು ನೆನೆಯಲಾರ, ಲಿಂಗವೇ ಅವನಿಗೆ ಸರ್ವಸ್ವ. ಹೇಗೆ ಪರುಷದ ಗೃಹದೊಳಗಿದ್ದವನು ಮನೆಮನೆಯನ್ನು ತಿರಿಯುವ ಅಗತ್ಯವಿಲ್ಲವೋ, ತೊರೆಯೊಳಗಿದ್ದವನು ಕೆರೆಯುದಕವನ್ನು ಬಯಸನೋ ಹಾಗೆ, ಮಂಗಳ ಲಿಂಗವನ್ನು ಅಂಗದ ಮೇಲೆ ಧರಿಸಿರುವ ಶಿವಭಕ್ತನು ಬೇರೆ ಲಿಂಗವನ್ನು ನೆನೆಯುವುದಿಲ್ಲ. ಮಂಗಳ ಲಿಂಗವೇ ಅವನ ಪಾಲಿಗೆ ಸಕಲ ಸರ್ವಸ್ವವೂ ಆಗಿದೆ ಎಂಬುದಾಗಿ ಉರಿಲಿಂಗಪೆದ್ದಿಯು ಲಿಂಗದ ಮಹತ್ತ್ವವನ್ನು ವಿವರಿಸಿರುವನು.
೨. ಗುರು ಲಘುವರ್ತನದಲ್ಲಿ ಏಕೆ ವರ್ತಿಸಬಾರದು?
ಉರಿಲಿಂಗಪೆದ್ದಿಯು ತನ್ನ ವಚನದಲ್ಲಿ ಲಘು-ಗುರು ವರ್ತನೆಗಳನ್ನು ವಿವರಿಸಿ ಹೇಳಿ, ಗುರುವು ಲಘುವರ್ತನದಲ್ಲಿ ವರ್ತಿಸಬಾರದೆಂದಿದ್ದಾನೆ. ಲಘುವಿಗೆ ಗುರುವಿನ ವರ್ತನೆ ಅಸಾಧ್ಯ: ಹಾಗಾಗಿ ಲಘು ಎಂದಿಗೂ ಲಘುವಾಗಿಯೇ ವರ್ತಿಸುತ್ತಾನೆ. ಆದರೆ ಗುರುವಾದವನು ಎಂದಿಗೂ ಲಘುವಾಗಿ ವರ್ತಿಸಬಾರದು, ಇದು ಸಲ್ಲದ ಆಚಾರವಾಗುವುದು. ಆದ್ದರಿಂದ ಗುರುವು ಸದಾ ಗುರುವರ್ತನೆಯನ್ನು ತೋರಬೇಕು. ಗುರು-ಲಿಂಗ-ಜಂಗಮವೆಂಬ ತ್ರಿವಿಧವನ್ನು ಲಘುವಾಗಿ ಭಾವಿಸದೆ ಆಚರಿಸುವುದು ಗುರುವಿನ ಲಕ್ಷಣ. ಆದ್ದರಿಂದ ಗುರುವು ಎಂದಿಗೂ ಲಘುವರ್ತನದಲ್ಲಿ ನಡೆದುಕೊಂಡು ತನ್ನ ಘನತೆಯನ್ನು ಹಾಳುಮಾಡಿಕೊಳ್ಳಬಾರದೆಂದಿರುವನು
೩. ಉರಿಲಿಂಗಪೆದ್ದಿಯ ವಚನಗಳ ಆಶಯವೇನು?
ಉರಿಲಿಂಗಪೆದ್ದಿಯು ಒಬ್ಬ ಮಹತ್ವದ ಚಿಂತಕನೆಂಬುದು ಆತನ ವಚನಗಳ ಆಶಯದಿಂದ ಅರಿವಾಗುತ್ತದೆ. ಆತ ಪರಶಿವ ಮತ್ತು ಲಿಂಗಗಳ ಅಭೇದವನ್ನು ಪ್ರತಿಪಾದಿಸಿರುವನು. ಇದನ್ನು ವಿವರಿಸುವಾಗ ಸೂರ್ಯ-ಹಗಲು, ದೀಪ-ಬೆಳಕು, ಹೂ-ಪರಿಮಳಗಳ ಸರಳ ಉದಾಹರಣೆಗಳನ್ನು ನೀಡಿರುವುದು ವೈಶಿಷ್ಟ್ಯವಾಗಿದೆ. ಅಂತೆಯೇ ಅಂಗದ ಮೇಲೆ ಲಿಂಗ ಧರಿಸಿದ ಭಕ್ತನು ಇತರ ಲಿಂಗಗಳನ್ನು ನೆನೆಯುವ ಗೊಡವೆಗೆ ಹೋಗನು. ಲಿಂಗವೇ ಸಕಲವೂ ಎಂಬ ಭಾವನೆ ಮೂಡುವುದನ್ನು ಸರಳವಾಗಿ ವಿವರಿಸಿದ್ದಾನೆ. ಗುರುವಾದವನು ಗುರು-ಲಿಂಗ-ಜಂಗಮಗಳ ತ್ರಿವಿಧವನ್ನು ಗಂಭೀರವಾಗಿ ಅರಿತು ಆಚರಿಸ ಬೇಕು, ಲಘುವರ್ತನದಲ್ಲಿ ಗುರುವಾದವನು ವರ್ತಿಸಬಾರದೆಂದು ಅಭಿಪ್ರಾಯಪಟ್ಟಿರುವನು. ಉರಿಲಿಂಗಪೆದ್ದಿಯ ವಚನಗಳು ಲಿಂಗದ ಮಹತ್ತ್ವವನ್ನು ಪ್ರತಿಪಾದಿಸುವ ಆಶಯಗಳನ್ನು ಒಳಗೊಂಡಿವೆ ಎಂಬುದನ್ನು ಅರಿಯಬಹುದು.
ಭಾಷಾಭ್ಯಾಸ:
೧. ಇವುಗಳ ನಾನಾರ್ಥಗಳನ್ನು ಬರೆಯಿರಿ: ತೊರೆ, ನೆನೆ, ಲಘು, ಗುರು

೨. ಸಮಾನಾರ್ಥಕಗಳನ್ನು ಬರೆಯಿರಿ: ಸೂರ್ಯ, ದೀಪ, ಪುಷ್ಪ, ಗೃಹ.
ಸೂರ್ಯ : ರವಿ, ಭಾಸ್ಕರ, ದಿನಪ, ದಿನಕರ, ಆದಿತ್ಯ, ಭಾನು, ನೇಸರ.
ದೀಪ : ಹಣತೆ, ಪ್ರಣತಿ, ಜ್ಯೋತಿ.
ಪುಷ್ಪ : ಹೂವು, ಕುಸುಮ, ಸುಮ.
ಗೃಹ : ಮನೆ, ಆಲಯ, ನಿವಾಸ.
೩. ಕಾಣಬಾರದು, ಆಗದಾಗದು – ಈ ನಿಷೇದಾರ್ಥಕಗಳನ್ನು ಗಮನಿಸಿ.
ಕಾಣಬಾರದು : ಕಾಣು, ಕಾಣುವುದು, ಕಾಣಬಹುದು ಇತ್ಯಾದಿಗಳಿಗೆ ನಿಷೇಧಾರ್ಥರೂಪ ಸೇರಿ ‘ಕಾಣಬಾರದು’ ಎಂದಾಗಿದೆ.
ಆಗದಾಗದು : ಆಗು, ಆಗುವುದು, ಆಗಬಹುದು ಇತ್ಯಾದಿಗಳಿಗೆ ನಿಷೇಧಾರ್ಥರೂಪ ಬಂದಿದೆ. ಆಗದು ಆಗದು ಎಂಬ ದ್ವಿರುಕ್ತಿ ರೂಪ ಬಳಕೆಯಾಗಿದೆ.
ಕೆಳಗಿನ ಪದ್ಯದ ಭಾವಾರ್ಥವನ್ನು ಬರೆಯಿರಿ:
೧. ಪರುಷದ ಗೃಹದೊಳಗಿದ್ದು, ತಿರಿವನೆ ಮನೆಮನೆಯ?
ತೊರೆಯೊಳಗಿದ್ದವನು ತೃಷೆಯಾಗಲರಸುವನೆ ಕೆರೆಯುದಕವ?
ಮಂಗಳಲಿಂಗ ಅಂಗದ ಮೇಲೆ ಇದ್ದು
ಅನ್ಯಲಿಂಗಗಳ ನೆನೆವನೆ ನಿಮ್ಮ ಭಕ್ತನು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ?
ಉರಿಲಿಂಗಪೆದ್ದಿಯು ಹನ್ನೆರಡನೆಯ ಶತಮಾನದಲ್ಲಿದ್ದ ಓರ್ವ ವಚನಕಾರ. ‘ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ’ ಎಂಬ ಅಂಕಿತದಲ್ಲಿ ಆತ ವಚನಗಳನ್ನು ರಚಿಸಿದ್ದಾನೆ. ಆತನ ವಚನಗಳಲ್ಲಿ ಈ ಮೇಲಿನ ವಚನವು ಅತ್ಯಂತ ವಿಶಿಷ್ಟವೆನ್ನಿಸಿದೆ.
ಶಿವಲಿಂಗವನ್ನು ಮೈಮೇಲೆ ಧರಿಸಿದ ಶಿವಶರಣನಿಗೆ ಬೇರೆ ಯಾವ ಕೆಟ್ಟ ವಿಚಾರಗಳೂ ಕಾಡುವುದಿಲ್ಲ. ಉಳಿದುದೆಲ್ಲವೂ ತೃಣಸಮಾನವೆಂಬುದಾಗಿ ಉರಿಲಿಂಗಪೆದ್ದಿಯು ಈ ವಚನದಲ್ಲಿ ವಿವರಿಸಿ ಹೇಳಿದ್ದಾನೆ.
ಬಯಸಿದ್ದೆಲ್ಲವನ್ನೂ ಕೊಡುವುದು ಪರುಷದ ಮಣಿ. ಆ ಪರುಷದ ಗೃಹದಲ್ಲಿ ವಾಸಿಸುವವನು ಮನೆಮನೆಗೆ ಹೋಗಿ ಭಿಕ್ಷೆಬೇಡಬೇಕಿಲ್ಲ. ಅದೇ ರೀತಿ ಹರಿಯುವ ತೊರೆಯ ನೀರು ಕುಡಿಯಲು ಉತ್ತಮವಾದುದು. ಅಂತಹ ತೊರೆಯೊಳಗಿರುವವನು ಬಾಯಾರಿಕೆಯಾದಾಗ ತೊರೆಯ ನೀರನ್ನು ಕುಡಿಯುತ್ತಾನೆಯೇ ವಿನಾ ಕೆರೆಯ ಕೊಳಕು ನೀರನ್ನು ಹುಡುಕುವುದಿಲ್ಲ. ಇದರಂತೆಯೇ ಮಂಗಳಕರವಾದ ಶಿವಲಿಂಗವನ್ನು ಅಂಗದ ಮೇಲೆ ಧರಿಸಿದ ಶಿವಭಕ್ತರು ಅನ್ಯಲಿಂಗಗಳನ್ನು ನೆನೆಯುವುದಿಲ್ಲ ಎಂದು ಉರಿಲಿಂಗಪೆದ್ದಿಯು ಈ ಮೇಲಿನ ವಚನದಲ್ಲಿ ವಿವರಿಸಿದ್ದಾನೆ.
ವಚನಗಳ ಸಾರಾಂಶ ಮತ್ತು ವಿಮರ್ಶೆ:
೧. ಸೂರ್ಯನಿಲ್ಲದೆ ಹಗಲುಂಟೆ ಅಯ್ಯಾ?
ದೀಪ ಇಲ್ಲದೆ ಬೆಳಕುಂಟೆ ಅಯ್ಯಾ?
ಪುಷ್ಪವಿಲ್ಲದೆ ಪರಿಮಳವನರಿಯಬಹುದೆ ಅಯ್ಯಾ?
ಸಕಲವಿಲ್ಲದೆ ನಿಷ್ಕಲವ ಕಾಣಬಾರದು.
ಮಹಾಘನ ನಿರಾಳ ಪರಶಿವನಿಂದ ಲಿಂಗವು ತೋರಿತ್ತು.
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ
ಉರಿಲಿಂಗಪೆದ್ದಿಯು ಈ ವಚನದಲ್ಲಿ ಆಕಾರಸಹಿತವಾದ (ಸಾಕಾರ) ದೇವತಾರಾಧನೆಗೂ ಆಕಾರರಹಿತ (ನಿಷ್ಕಲ)ವಾದ ದೇವತಾರಾಧನೆಗೂ ಇರುವ ಸಂಬಂಧವನ್ನು ವಿವರಿಸಿದ್ದಾನೆ. ಸಂಪ್ರದಾಯದ ಪ್ರಕಾರ ನಿಷ್ಕಲವಾದ ದೇವತಾರಾಧನೆಯು ಸಾಕಾರ ಆರಾಧನೆಗಿಂತ ಶ್ರೇಷ್ಠ. ಆದರೆ ಸೂರ್ಯನಿರದೆ ಹಗಲು ಇರದಂತೆ, ದೀಪವಿಲ್ಲದೆ ಬೆಳಕಿರದಂತೆ, ಪುಷ್ಪವಿಲ್ಲದೆ ಪರಿಮಳವಿರದಂತೆ ಸಾಕಾರ ರೂಪಿಯಾದ ಶಿವನಿಲ್ಲದೆ ನಿರಾಕಾರ ರೂಪಿಯೂ, ಲಿಂಗರೂಪಿಯೂ ಆದ ಶಿವನಿರುವುದು ಸಾಧ್ಯವಿಲ್ಲ ಎಂಬ ಭಾವನೆ ಅವನದಾಗಿದೆ.
ಶಬ್ದಾರ್ಥ: ಸಕಲ – ಸಮಗ್ರವಾದುದು. ಪರಿಪೂರ್ಣವುಳ್ಳದ್ದು (ಸಕಲತತ್ತ್ವವೆಂದರೆ ಪರಶಿವನ ಸ್ವರೂಪವೇ ಆಗಿದೆ. ಸಕಲ – ನಿಷ್ಕಲವೆಂಬವು ವಚನಕಾರರ ಆಕಾರ ಮತ್ತು ನಿರಾಕಾರ ಸ್ವರೂಪವನ್ನು ಕುರಿತ ಜಿಜ್ಞಾಸೆಯಾಗಿದೆ); ನಿಷ್ಕಲ – ನಿರಾಕಾರವಾದ, ಅಖಂಡವಾದ, ಕಲಾರಹಿತವಾದ (ನಿರಾಕಾರ ಸ್ವರೂಪವಾದ ಪರವಸ್ತು, ಶಿವಲಿಂಗ); ಮಹಾಘನ – ಅತಿಶ್ರೇಷ್ಠವಾದ, ಉನ್ನತವಾದ; ನಿರಾಳ – ಚಿಂತೆಯಿಲ್ಲದೆ.
೨. ಪರುಷದ ಗೃಹದೊಳಗಿದ್ದು, ತಿರಿವನೆ ಮನೆಮನೆಯ?
ತೊರೆಯೊಳಗಿದ್ದವನು, ತೃಷೆಯಾಗಲರಸುವನೆ ಕೆರೆಯುದಕವ?
ಮಂಗಳಲಿಂಗ ಅಂಗದ ಮೇಲೆ ಇದ್ದು,
ಅನ್ನಲಿಂಗಗಳ ನೆನೆವನೆ ನಿಮ್ಮ ಭಕ್ತನು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ?
ಪರುಷ ಎಂದರೆ ಮುಟ್ಟಿದ್ದನ್ನೆಲ್ಲ ಬಂಗಾರವಾಗಿಸುವ ಮಣಿ. ಅದರ ನಿವಾಸದಲ್ಲಿರುವವನು ಬೇಕಾದ್ದನ್ನೆಲ್ಲ ಪರುಷಮಣಿಯಿಂದಲೇ ಪಡೆಯುವನೇ ವಿನಹ ಮನೆ ಮನೆಗೆ ಹೋಗಿ ಭಿಕ್ಷೆ ಬೇಡುವುದಿಲ್ಲ. ಹಾಗೆಯೇ ಹರಿಯುತ್ತಿರುವ ತೊರೆಯೊಳಗಿರುವವನು ಬಾಯಾರಿದಾಗ ತೊರೆಯ ನೀರನ್ನು ಸೇವಿಸುತ್ತಾನಲ್ಲದೆ, ನೀರಿಗೆಂದು ಮತ್ತೊಂದು ಕೆರೆಯ ನೀರನ್ನು ಹುಡುಕುತ್ತಾ ಹೋಗುವುದಿಲ್ಲ. ಕುಡಿಯಲು ಕೆರೆಯಲ್ಲಿನ ನಿಂತ ನೀರಿಗಿಂತ ಹರಿವ ತೊರೆಯ ನೀರು ಅತ್ಯುತ್ತಮ. ಹಾಗೆಯೇ ಶುಭಕರವಾದ ಶಿವಲಿಂಗವನ್ನು ಮೈಮೇಲೆ ಧರಿಸಿದವನು ಬೇರೆ ಲಿಂಗವನ್ನು ನೆನೆಯುವುದಿಲ್ಲ ಎಂದು ಉರಿಲಿಂಗಪೆದ್ದಿಯು ಹೇಳಿದ್ದಾನೆ. ವೀರಶೈವ ಸಿದ್ಧಾಂತದ ಪ್ರಕಾರ ದೇಹದ ಮೇಲಿರುವ ಇಷ್ಟಲಿಂಗವು ದೇವಾಲಯಗಳಲ್ಲಿ, ಪುಣ್ಯಸ್ಥಳಗಳಲ್ಲಿ ಇರುವ ಇತರ ಶಿವಲಿಂಗಗಳಿಗಿಂತ ಬಹಳ ಶ್ರೇಷ್ಠ. ಈ ಹಿನ್ನೆಲೆಯಲ್ಲೇ ಪ್ರಸ್ತುತ ವಚನ ರಚನೆಯಾಗಿದೆ.
ಶಬ್ದಾರ್ಥ: ಪರುಷ-ಮುಟ್ಟಿದ್ದನ್ನು ಚಿನ್ನವಾಗಿಸುವ (ಮಣಿ) ಶಿಲೆ: ಗೃಹ-ಮನೆ: ತಿರಿ-ಬೇಡು; ತೊರೆ-ನದಿ; ತೃಷೆ-ಬಾಯಾರಿಕೆ; ಉದಕ-ನೀರು.
೩. ಲಘು ಗುರುವಪ್ಪನೆ? ಗುರು ಲಘುವಪ್ಪನೆ? ಆಗದಾಗದು
ಗುರುಗುರುವೆ, ಲಘುಲಘುವೆ,
ಶ್ರೀಗುರು ಲಘುವರ್ತನದಲ್ಲಿ ವರ್ತಿಸಿದಡೆ ಆಗದು ಆಚಾರ
ಶ್ರೀಗುರು ಲಿಂಗ ಜಂಗಮ ಪ್ರಸಾದವನು
ತಾನೆ ಲಘು ಮಾಡಿ ಲಘುವಾದನಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
ಗುರವಿನ ಘನತೆಯನ್ನು ಸಾರುವ ವಚನವಿದು. ಲಘು ಎಂಬುದಕ್ಕೆ ಚಿಕ್ಕದು, ಹಗುರವಾದುದು ಎಂಬರ್ಥವಿದೆ. ಅಂತೆಯೇ ಗುರು ಎಂಬುದಕ್ಕೆ ದೊಡ್ಡದು, ಹಿರಿದು ಎಂಬರ್ಥಗಳಿವೆ. ವರ್ತನೆಯಲ್ಲಿ ಹಗುರವಾಗಿ ನಡೆದುಕೊಳ್ಳುವುದು. ಗಂಭೀರವಾಗಿ ಘನತೆಯಿಂದ ನಡೆದುಕೊಳ್ಳುವುದು ಮುಂತಾದ ಬಗೆಗಳಿವೆ. ಆದ್ದರಿಂದ ಉರಿಲಿಂಗಪೆದ್ದಿಯು ಲಘುವು ಗುರುವಿನ ವರ್ತನೆ ತೋರನು. ಗುರುವಾದವನು ಲಘುವಾಗಿ ವರ್ತಿಸಬಾರದೆಂದಿದ್ದಾನೆ. ಅವನ ಅಭಿಪ್ರಾಯದಲ್ಲಿ ಲಘು ವರ್ತನೆಯ ವ್ಯಕ್ತಿ ಯಾವಾಗಲೂ ಲಘುವಾಗಿಯೇ ಉಳಿಯುತ್ತಾನೆ. ಗುರು ಗುರುವಾಗಿಯೇ ಇರುತ್ತಾನೆ. ಒಬ್ಬ ಶ್ರೇಷ್ಠ ಗುರುವಾದವನು ಲಘುವರ್ತನೆಯಲ್ಲಿ ನಡೆದುಕೊಳ್ಳುವುದು ಸರಿಯಾದ ಆಚಾರವಲ್ಲ. ಗುರು-ಲಿಂಗ-ಜಂಗಮದೇವ ತ್ರಿವಿಧವನ್ನು ಲಘುವಾಗಿ ಕಂಡವನು ತಾನೇ ಲಘುವಾಗುತ್ತಾನೆ. ಆದ್ದರಿಂದ ತ್ರಿವಿಧವನ್ನು ದೊಡ್ಡದೆಂದು ಭಾವಿಸಿ ಪಾಲಿಸ ಬೇಕೆಂದು ಉರಿಲಿಂಗಪೆದ್ದಿಯು ತಿಳಿಸಿದ್ದಾನೆ.
ಶಬ್ದಾರ್ಥ: ಲಘು-ಸಣ್ಣದು; ಗುರು-ದೊಡ್ಡದು, ಬೋಧಕ
ಟಿಪ್ಪಣಿಗಳು:
೧. ನಿಷ್ಕಲ
ಕಲಾರಹಿತನಾದ ಪರಶಿವ. ಸೃಷ್ಟಿಪೂರ್ವದಲ್ಲಿ ಪರಶಿವನು ಕಲಾಶಕ್ತಿರಹಿತನಾಗಿರುತ್ತಾನೆ. ಸೃಷ್ಟಿಸಬೇಕೆಂಬ ಇಚ್ಛೆ ಅವನಲ್ಲಿ ಉಂಟಾದಾಗಲೂ ಶಕ್ತಿ (ಕಲೆ) ಇನ್ನೂ ಅವ್ಯಕ್ತ ಸ್ಥಿತಿಯಲ್ಲೇ ಇರುತ್ತದೆ. ಶಕ್ತಿಯ ಅಂತಹ ಸ್ಥಿತಿಯನ್ನು ಚಿತ್ತು (ಚಿತ್ಶಕ್ತಿ) ಅಥವಾ ನೆನಹು ಎಂದು ಕರೆಯಲಾಗಿದೆ. ಶಕ್ತಿಯು ಈ ಸ್ಥಿತಿಯಲ್ಲಿದ್ದಾಗ ಅದನ್ನೊಳಗೊಂಡ ಶಿವನು ನಿಷ್ಕಲಲಿಂಗನೆನಿಸಿಕೊಳ್ಳುತ್ತಾನೆ. ಆದರೆ ನವಿಲಿನ ಮೊಟ್ಟೆಯಲ್ಲಿ ಹೇಗೆ ಮುಂದೆ ಹುಟ್ಟಲಿರುವ ನವಿಲಿನ ವಿವಿಧ ವರ್ಣಗಳು ಇತ್ಯಾದಿಗಳಿರುತ್ತವೋ ಹಾಗೆಯೇ ನಿಷ್ಕಲ ತತ್ತ್ವದಲ್ಲಿ ಮುಂದೆ ಆಗುವ ವೈವಿಧ್ಯಮಯ ಸೃಷ್ಟಿಯೆಲ್ಲವೂ ಅವ್ಯಕ್ತವಾಗಿ ಅಡಗಿರುತ್ತವೆ.
೨. ಸಕಲ
ಕಲಾಸಹಿತನಾದ ಪರಶಿವ. ಸೃಷ್ಟಿಯಾದಾಗ ಪರಶಿವನ ಶಕ್ತಿಯು ವ್ಯಕ್ತವಾಗುತ್ತದೆ. ಆಗ ಶಿವನು ಸಕಲವೆನಿಸಿಕೊಳ್ಳುತ್ತಾನೆ
ಹೊಂದಿಸಿ ಬರೆಯುವುದಕ್ಕೆ ಬೇಕಾದ ಮಾಹಿತಿ
- ಉರಿಲಿಂಗಪೆದ್ದಿ – ವಚನಗಳು
- ಉರಿಲಿಂಗಪೆದ್ದಿ – ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ
- ಕೆರೆಯುದಕವನ್ನು ಅರಸದವನು – ತೊರೆಯೊಳಗಿದ್ದವನು.